Saturday, December 27, 2008

ಬರಲಿದೆ...ಔಷಧ ಬೆಳೆಗಳ ಮಿಷನ್‌


2009 ಜನವರಿಗೆ ರಾಷ್ಟ್ರೀಯ ಔಷಧಿ ಬೆಳೆಗಳ ಮಿಷನ್‌ ಅನುಷ್ಠಾನ. ಇದರಿಂದ ಬಹಳಷ್ಟು ಸಹಾಯಧನ ಸಿಗುತ್ತದೆ ಎಂದು ಸಿಕ್ಕ ಸಿಕ್ಕ ಹಾಗೆ ಬಳಸಿಕೊಳ್ಳುವ ಬದಲು ಯೋಜನೆಯ ಸದುಪಯೋಗ ಮುಖ್ಯ. ಇಲಾಖೆಯವರು ಅರ್ಹರಿಗೆ ಯೋಜನೆ ತಲುಪಿಸಿದರೆ ಇದರ ಉದ್ದೇಶ ಸಾರ್ಥಕ.


ನಗರ ಪ್ರದೇಶಗಳು ೃಹತ್ತಾಗಿ ಬೆಳೆಯುತ್ತಿವೆ. ಪರಿಣಾಮ, ಕೃಷಿ ಭೂಮಿಗಳು ಕಡಿಮೆಯಾಗುತ್ತಿದೆ. ಭೂಮಿ ಇರುವ ಕೃಷಿಕರು ಬೇಸಾಯದ ಬಗ್ಗೆ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಬೇಸಾಯ ಮಾಡುವವರಿಗೆ ಬೆಲೆ ಕೈಕೊಡುತ್ತಿದೆ. ಎಂತಹ ಸ್ಥಿತಿ!
ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿಯೇ ಕೃಷಿ ಉತ್ಪನ್ನ ಕಡಿಮೆ ಆಗುತ್ತಿರುವುದು ವಿಷಾದನೀಯ. ಅದಕ್ಕಾಗಿ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಸ್ತುತ ತರುತ್ತಲೂ ಇದೆ. ಬಹಳಷ್ಟು ರೈತರು ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ನೀಡುವ ಅನುದಾನದ ಪ್ರಯೋಜನ ಪಡೆದುಕೊಂಡಿದ್ದಾರೆ. ಇದರಿಂದ ಸಿಗುವ ಅನುದಾನ ಬಳಸಿಕೊಂಡು ತಮ್ಮ ಜಮೀನಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಔಷಧ ಬೆಳೆಗಳನ್ನು ಉತ್ತೇಜಿಸಲಿಕ್ಕಾಗಿ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ ಮಾದರಿಯಲ್ಲಿಯೇ ರಾಷ್ಟ್ರೀಯ ಔಷಧಿ ಬೆಳೆಗಳ ಮಿಷನ್‌ ಸದ್ಯದಲ್ಲಿಯೇ ಅನುಷ್ಠಾನಕ್ಕೆ ಬರಲಿದೆ.
ಭಾರತ ಸರ್ಕಾರ ಘೋಷಣೆ ಮಾಡಿರುವ ಹೊಸ ಯೋಜನೆ ಇದು. ಇಂದಿನ ಜನರಲ್ಲಿ ನೈಸರ್ಗಿಕ, ಆಯುರ್ವೇದ ಔಷಧ ಮತ್ತು ಸೌಂದರ್ಯ ವರ್ಧಕಗಳ ಬಗ್ಗೆ ಆಸಕ್ತಿ ಮೂಡುತ್ತಿದೆ. ಇದನ್ನು ಗಮನಿಸಿದ ಸರ್ಕಾರ ಔಷಧ ಬೆಳೆಗಳನ್ನು ರೈತರ ಹೊಲದಲ್ಲಿ ಬೆಳೆಸಲು, ಅವರನ್ನು ಬೆಳೆಯುವಂತೆ ಉತ್ತೇಜಿಸುವುದು ಯೋಜನೆ ಉದ್ದೇಶ.
ಯಾರಿಗೆ ಯೋಜನೆ?
ಔಷಧಿ ಬೆಳೆಗಳನ್ನು ಯಾವ ಕೃಷಿಕ ಬೇಕಾದರೂ ಬೆಳೆಯಬಹುದು. ಭೂ ಗುಣವನ್ನು ನೋಡಿ. ಒಬ್ಬೊಬ್ಬರೇ ಔಷಧ ಬೆಳೆಗಳನ್ನು ಬೆಳೆದರೆ ಕೊಯ್ಲೋತ್ತರ ಸಂಸ್ಕರಣ ಘಟಕ ಮುಂತಾದವುಗಳಿಗೆ ಸಹಾಯಧನ ಕಡಿಮೆ. ತಮ್ಮದೇ ಗುಂಪು ಸ್ಥಾಪಿಸಿಕೊಂಡು ಕೃಷಿ ಮಾಡುವವರಿಗೆ ಈ ಔಷಧ ಮಿಷನ್‌ ಪ್ರಯೋಜನ ನೂರಕ್ಕೆ ನೂರು. ಸ್ವಸಹಾಯ ಗುಂಪುಗಳು ಈ ಕೃಷಿ ಮಾಡಲು ತೊಡಗಿದರೆ ಮಿಷನ್‌ ಸಹಕಾರದಿಂದ ಹೆಚ್ಚನ ಸ್ಥಿರತೆ ಸಾಧಿಸಿಕೊಳ್ಳಲಿಕ್ಕೆ ಅನುಕೂಲವಾಗುತ್ತದೆ. ಔಷಧ ಬೆಳೆಗಳನ್ನು ಬೆಳೆಯುವ ಪ್ರತಿಯೊಂದು ಹಂತದಲ್ಲಿಯೂ ಸಹಾಯಧನ ದೊರೆಯುತ್ತದೆ.
ನರ್ಸರಿ ಅಭಿವೃದ್ಧಿ
ಔಷಧೀಯ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕೆಂದರೆ ಉತ್ತಮ ನರ್ಸರಿಯ ಅಗತ್ಯವು ಇದೆ. ಇದನ್ನು ಅಭಿವೃದ್ಧಿಪಡಿಸಲು ಈ ಮಿಷನ್‌ ಸಹಾಯಧನ ನೀಡುತ್ತದೆ. ಇದು ಎರಡು ವಿಭಾಗದಲ್ಲಿ ನೀಡಲಾಗುತ್ತದೆ. ಸಾರ್ವಜನಿಕರು, ಅಂದರೆ ಸ್ವಸಹಾಯ ಗುಂಪುಗಳು ನರ್ಸರಿ ಘಟಕ ಪ್ರಾರಂಭಿಸುತ್ತಾರೆಂದರೆ ಶೇ. 100 ಸಹಾಯಧನ ದೊರೆಯುತ್ತದೆ. ದೊಡ್ಡ ಪ್ರಮಾಣದ ಘಟಕಕ್ಕೆ 20 ಲಕ್ಷ ರೂ. ಮತ್ತು ಸಾರ್ವಜನಿಕರು ಸ್ಥಾಪಿಸುವ ಸಣ್ಣ ಘಟಕ್ಕೆ 4 ಲಕ್ಷ ರೂ. ಸಹಾಯಧನ ನೀಡಲಾಗುತ್ತದೆ. ಖಾಸಗಿ ಸಂಸ್ಥೆಗಳು ನರ್ಸರಿಯನ್ನು ದೊಡ್ಡ ಪ್ರಮಾಣದಲ್ಲಿ ಮಾಡಿದರೆ ಶೇ. 50 (10 ಲಕ್ಷ ರೂ.) ಮತ್ತು ಸಣ್ಣ ಘಟಕಕ್ಕೆ 2 ಲಕ್ಷ ರೂ. ಸಹಾಯಧನ ದೊರೆಯುತ್ತದೆ.
ಔಷಧ ಬೆಳೆ ಬೆಳೆಯುವುದು ಸುಲಭವಲ್ಲ. ಸಾವಯವ ಕೃಷಿ ಮಾಡಿದರೆ ಮಾರುಕಟ್ಟೆ ಮೌಲ್ಯ ಜಾಸ್ತಿ. ಬೇರೆ ಕಡೆಯಿಂದ ಸಾವಯವ ಪೋಷಕಾಂಶ ತಂದು ಕೃಷಿ ಮಾಡುವುದಾದರೆ ವೆಚ್ಚ ಹೆಚ್ಚು. ರಾಸಾಯನಿಕ ಪೋಷಕಾಂಶ ನೀಡಿದರು ಖರ್ಚು ಕಡಿಮೆಯಾಗದು. ಪೋಷಕಾಂಶ, ನೀರಾವರಿ ಉಳಿದ ಕೆಲಸಗಳಿಗೆ ತಗಲುವ ವೆಚ್ಚದ ಶೇ. 20 ರಿಂದ ಶೇ. 75ರವರೆಗೂ ಸಹಾಯಧನ ಲಭ್ಯ. ಆದರೆ ಷರತ್ತು ಅನ್ವಯ. ಬೆಳೆಯುವ ಪ್ರದೇಶ ವಿಸ್ತರಣೆಯನ್ನು ಗೊಂಚಲು ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎಂಬುದು ಆ ಷರತ್ತು.
ಕೊಯ್ಲೋತ್ತರ ಸಂಸ್ಕರಣೆ
ಬೆಳೆಗಳನ್ನು ಕಟಾವು ಮಾಡಿದ ನಂತರದ ಚಟುವಟಿಕೆಗಳಾದ ಒಣಗಿಸುವ ಘಟಕ ಸ್ಥಾಪನೆ ಮತ್ತು ಉತ್ಪನ್ನಗಳನ್ನು ಶೇಖರಿಸಿಡಲು ಅಗತ್ಯವಿರುವ ಗೋದಾಮು ನಿರ್ಮಾಣಕ್ಕೆ ತಗಲುವ ವೆಚ್ಚಕ್ಕೆ ಕ್ರಮವಾಗಿ ಸಾರ್ವಜನಿಕ ಶೇ. 100ರಷ್ಟು ಮತ್ತು ಖಾಸಗಿ ಸಂಸ್ಥೆಗಳಿಗೆ ಶೇ. 50 ಸಹಾಯಧನವನ್ನು ರಾಷ್ಟ್ರೀಯ ಔಷಧ ಬೆಳೆಗಳ ಮಿಷನ್‌ ನೀಡುತ್ತದೆ.
ಔಷಧಿ ಬೆಳೆ ಬೆಳೆಯುವುದು ಮಾತ್ರವಲ್ಲದೆ, ಅದನ್ನು ಸರಿಯಾದ ರೀತಿ ಸಂಸ್ಕರಣೆ ಮಾಡಬೇಕಾಗುತ್ತದೆ. ಇದರ ಸಂಸ್ಕರಣಾ ಘಟಕ ಸ್ಥಾಪನೆಗೆ ಶೇ. 25ರಂತೆ 50 ಲಕ್ಷಗಳವರೆಗೆ ದೊರೆಯುತ್ತದೆ. ಇದಲ್ಲದೇ, ಔಷಧ ಬೆಳೆಗಳನ್ನು ಬೆಳೆಸಿ ಅದರಿಂದ ಮೌಲ್ಯವರ್ಧಿತ ಉತ್ಪನ್ನಗಳನ್ನು ಕಂಡುಹಿಡಿಯುವ ದೃಷ್ಠಿಯಿಂದ ಪ್ರಯೋಗಾಲಯ ಸ್ಥಾಪಿಸುವುದಾದರೆ ಶೇ. 30ರಂತೆ 30 ಲಕ್ಷಗಳವರೆಗೆ ಹಾಗೂ ಮಾರುಕಟ್ಟೆ ಉತ್ತೇಜನಕ್ಕೆ ಶೇ. 10ರಂತೆ 10 ಲಕ್ಷದವರೆಗೆ ಸಹಾಯಧನ ದೊರೆಯುತ್ತದೆ. ಅಷ್ಟೇ ಅಲ್ಲದೆ, ಮಾರುಕಟ್ಟೆ ಮೂಲಭೂತ ಸೌಕರ್ಯ ನಿರ್ಮಾಣಕ್ಕೆ ಶೇ. 100ರಂತೆ ಗರಿಷ್ಟ 20 ಲಕ್ಷದವರೆಗೆ ಸಹಾಯಧನವನ್ನು ಮಿಷನ್‌ ಒದಗಿಸುತ್ತದೆ.
ಇದಲ್ಲದೇ ಮಾರುಕಟ್ಟೆ ತಂತ್ರ, ಮರು ಖರೀದಿ ಚಟುವಟಿಕೆಗಳು, ಸಾವಯವ ಧೃಡೀಕರಣ, ಬೆಳೆ ವಿಮೆಯಂತಹ ಚಟುವಟಿಕೆಗಳಿಗೆ ಯೋಜನಾ ವರದಿಯನ್ನಾಧರಿಸಿ ಸಹಾಯಧನವನ್ನು ನೀಡಲಾಗುತ್ತದೆ. ಈ ಸಹಾಯಧನ ಸುಮಾರು 93 ಬೆಳೆಗಳಿಗೆ ದೊರೆಯುತ್ತದೆ. ಹಾಗೆಯೇ ಬೆಳೆಗಳನ್ನು ಆಧರಿಸಿ ಶೇ. 20ರಿಂದ ಶೇ. 75ರವರೆಗೆ ಸಬ್ಸಿಡಿಯು ಸಿಗುತ್ತದೆ.
ಮರುಖರೀದಿ ಒಪ್ಪಂದ
ಔಷಧ ಬೆಳೆ ಬೆಳೆದಾಗ ರೈತರಿಗೆ ಎದುರಾಗುವ ಮೊದಲ ಸಮಸ್ಯೆ ಮಾರುಕಟ್ಟೆಯದ್ದು. ಅದಕ್ಕಾಗಿ ಈ ಬೆಳೆಯಲು ತೊಡಗುವ ರೈತರು ತಮ್ಮದೇ ಆದ ಸಹಕಾರ ಸಂಘವನ್ನು ಸ್ಥಾಪಿಸಿಕೊಳ್ಳುವುದು ಉತ್ತಮ. ಈ ಸಂಘದ ಮೂಲಕ ವಿಶ್ವಾಸನೀಯ ಕಂಪೆನಿಗಳೊಂದಿಗೆ ಖರೀದಿ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಉತ್ತರ ಕನ್ನಡದ ಕಾರವಾರದಲ್ಲಿ `ಪ್ರಗತಿ' ಅನ್ನುವ ಕಂಪೆ ಈಗಾಗಲೇ 40 ಔಷಧೀಯ ಉತ್ಪನ್ನಗಳನ್ನು ಖರೀದಿಸುತ್ತಿದೆ. ಇದಲ್ಲದೇ ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಔಷಧೀಯ ಬೆಳೆಗಳನ್ನು ಖರೀದಿಸುತ್ತವೆ. ಒಪ್ಪಂದ ಮಾಡಿಕೊಳ್ಳುವಾಗ ಮಾತ್ರ ರೈತರು ಜಾಗರೂಕರಾಗಿದ್ದರೆ ಒಳ್ಳೆಯದು.
ರಾಷ್ಟ್ರೀಯ ಔಷಧ ಬೆಳೆಗಳ ಮಿಷನ್‌ನ ಕ್ರೀಯಾ ಯೋಜನೆ ಸಿದ್ಧವಾಗಿದ್ದು ಜನವರಿ 2009ರ ಸಮಯಕ್ಕೆ ಆಶಾವಾದಿ ರೈತರ ಬಳಕೆಗೆ ಲಭ್ಯ. ಕೊನೆಯ ವಿನಂತಿ, ಸರ್ಕಾರದಿಂದ ದೊರೆಯುವ ಸಹಾಯಧನವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಸಿಕ್ಕುತ್ತದೆ ಎಂದು ಸಿಕ್ಕ ಸಿಕ್ಕ ಹಾಗೆ ಬಳಸಿಕೊಳ್ಳದಿದ್ದರೆ ಸರ್ಕಾರ ಅನುಷ್ಠಾನಕ್ಕೆ ತರುವ ಯೋಜನೆಗಳು ಸಾರ್ಥಕ. ಹಾಗೆಯೇ ತೋಟಗಾರಿಕಾ ಇಲಾಖೆಯವರು ಅರ್ಹ ಫಲಾನುಭವಿಗಳಿಗೆ ಯೋಜನೆ ಸಮರ್ಪಕವಾಗಿ ಸಿಗುವಂತೆ ಮಾಡಬೇಕು.
ನಾಗರಾಜ ಮತ್ತಿಗಾರ

No comments: