Friday, December 19, 2008

ತುಡುವೆ ಜೇನಿನ ಕೃತಕ ಹಿಸ್ಸೆ!


                                               .                        
      ಜೇನು ಸಹಜ ಕೃಷಿಯ ಒಂದು ಭಾಗ. ತೋಟಗಾರಿಕಾ ಬೆಳೆಗಳ ಪರಾಗ  ಸ್ಪರ್ಷ ಕ್ರಿಯೆ ಹೆಚ್ಚಿಸಿ ಬೆಳೆ ಉತ್ತಮವಾಗುವಂತೆ ನೊಡಿಕೊಳ್ಳುವ ಜೇನು ತುಪ್ಪವನ್ನು ನೀಡಿ ಇನ್ನಷ್ಟು ಉಪಆದಾಯವನ್ನೂ ತಂದುಕೊಡುತ್ತದೆ. ಆದ್ದರಿಂದ  ವರ್ಷದಿಂದ ವರ್ಷಕ್ಕೆ ಜೇನು ಸಾಕಾಣಿಕೆ ಮಾಡುವ ಕೃಷಿಕರ ಸಂಖ್ಯೆ ಹೆಚ್ಚುತ್ತಿದೆ. ಮನೆಯ ಸುತ್ತಮುತ್ತ  ಪೆಟ್ಟಿಗೆಯಲ್ಲಿ ಸಾಕುವ ತುಡುವೆಜೇನು  ಸಾಕಾಣಿಕೆ ಮಾಡುವ   ಕೃಷಿಕರಿಗೆ  ನವೆಂಬರ್ ಡಿಸೆಂಬರ್ ತಿಂಗಳು ಬಂತೆಂದರೆ ಸಮಸ್ಯೆ ಪ್ರಾರಂಭವಾಯಿತೆಂದೇ ಅರ್ಥ. ಕಾರಣ  ಮಳೆಗಾಲಪೂರ್ತಿ  ಕೃತಕ ಆಹಾರ  ಕೊಟ್ಟು  ಮನೆಯಂಗಳದಲ್ಲಿ ಸಾಕಿದ  ತುಡುವೆ ಜೇನಿನ  ರಾಣಿಗೆ   ಹಿಸ್ಸೆಯಾಗಿ ಹೊಸರಾಣಿಹುಳುವನ್ನು ಸೃಷ್ಟಿಸಿ ಪೆಟ್ಟಿಗೆ  ಬಿಟ್ಟು  ಬೇರೆ  ಗೂಡನ್ನು ಅರಸಿ ಓಡಿಹೋಗುವ ಆತುರ. ಜೇನು ರಾಣಿಯ  ಈ ಪ್ರಾಕೃತಿಕ  ಕ್ರಿಯೆ  ತುಡುವೆಜೇನು ಸಾಕಾಣಿಕಾದಾರನಿಗೆ ಮಾತ್ರ ನಷ್ಟ. ಪೆಟ್ಟಿಗೆಯಲ್ಲಿನ ಜೇನುಪಡೆ   ಕಣ್ಣಾರೆ  ಕಾಡುಪಾಲಾಗುವುದನ್ನು  ನೋಡುತ್ತಾ  ನಿಲ್ಲಬೇಕು.  ಜೇನಿನ  ಹಿಸ್ಸೆ ಪ್ರಕ್ರಿಯೆನ್ನಾಗಲಿ ಅಥವಾ ಹೊಸ  ರಾಣಿಯ  ಹುಟ್ಟನ್ನಾಗಲಿ ರಾಣಿಮೊಟ್ಟೆಯ ಮುರಿದು  ತಡೆಗಟ್ಟಬಹುದಾದರೂ  ಅದು  ಪ್ರಕೃತಿ  ಸಹಜವಲ್ಲ.ಹಾಗೂ ಮತ್ತೊಂದು ಜೇನು ಸಂಸಾರ ಅಭಿವೃದ್ಧಿಯನ್ನು ತಡೆಗಟ್ಟಿದಂತಾಗುತ್ತದೆ. ಜತೆಗೆ  ರಾಣಿಜೇನು ಮೊಟ್ಟೆಯನ್ನಿಟ್ಟ ಸಮಯದಲ್ಲಿ   ಗೂಡಿಗೆ  ಕೈಹಾಕುವುದು  ಕಷ್ಟಕರ. ಹಾಗಾಗಿ ಜೇನು ಹುಟ್ಟನ್ನು ಮನೆಯಲ್ಲಿಯೇ ಉಳಿಸಿಕೊಂಡು ಗೂಡು ಹೆಚ್ಚಿಸಿಕೊಳ್ಳುವುದು ಎಲ್ಲಾ ಜೇನು ಕೃಷಿಕರ ಆಶಯ.  ಹಳೆರಾಣಿ ತನ್ನ ಪಾಲಿನ  ಹುಳುಗಳನ್ನು ಕರೆದುಕೊಂಡು  ಕಾಡುಪಾಲಾಗದಂತೆ  ತಡೆದು, ಜೇನಿನ ಹಿಸ್ಸೆಯನ್ನು ಸಹಜವಾಗಿ ನಡೆಯುವಂತೆ  ಮಾಡಿ  ಜೇನು ಸಂಸಾರವನ್ನೂ  ಹೆಚ್ಚಿಸಿಕೊಳ್ಳಲು ಇಲ್ಲಿದೆ  ಸುಲಬೋಪಾಯ.
     ಈಗಾಗಲೆ  ಇರುವ ಜೇನು ಪೆಟ್ಟಿಗೆಯನ್ನೇ  ಹೋಲುವ(ಒಂದೇ  ಬಣ್ಣದ್ದಾದರೆ  ಉತ್ತಮ)  ಇನ್ನೊಂದು  ಪೆಟ್ಟಿಗೆಯನ್ನು ಮೂಲಪೆಟ್ಟಿಗೆಯಿಟ್ಟ ಜಾಗಕ್ಕಿಂತ  ೩  ಅಡಿ ದೂರದಲ್ಲಿ  ಇಡಬೇಕು. ಮೂಲಪೆಟ್ಟಿಗೆಯನ್ನು  ಕೂಡ  ಅದರ  ಜಾಗದಿಂದ  ೩ ಅಡಿ  ಪಕ್ಕಕ್ಕೆ  ಇಡಬೇಕು(ಚಿತ್ರದಲ್ಲಿ ತೋರಿಸಿದಂತೆ). ಬೆಳಿಗಿನ  ಸಮಯದಲ್ಲಿ  ಹಿಸ್ಸೆ  ಪ್ರಕ್ರಿಯೆ  ಮಾಡಿದರೆ  ಉತ್ತಮ. ಮೂಲಪೆಟ್ಟಿಗೆಯಲ್ಲಿನ  ಯಾವುದಾದರೂ  ನಾಲ್ಕು  ತತ್ತಿಗಳನ್ನು  ಹೊಸ ಪೆಟ್ಟಿಗೆಗೆ  ಹಾಕಿ  ಮುಚ್ಚಳ ಹಾಕಿದರೆ  ಅರ್ದ ಕೆಲಸ  ಮುಗಿದಂತೆ.  ಈಗ  ಒಂದು  ಪೆಟ್ಟಿಗೆಯಲ್ಲಿ  ರಾಣಿನೊಣ  ಇರುತ್ತದೆ.  ರಾಣಿ ನೊಣ ಇರದ  ಇನ್ನೊಂದು  ಪೆಟ್ಟಿಗೆಯಲ್ಲಿ  ಇರುವ  ಕಡ್ಡಿಮೊಟ್ಟೆಗೆ  ಜೇನುಹುಳುಗಳು  ರಾಜಾಷಾಯಿ  ಯೆಂಬ  ಆಹಾರವನ್ನು  ಕೊಟ್ಟು  ರಾಣಿಯನ್ನಾಗಿ  ಪರಿವರ್ತಿಸಿಕೊಳ್ಳುತ್ತವೆ. ಹೀಗೆ ಹಿಸ್ಸೆಮಾಡಿ  ೧೩  ದಿವಸಕ್ಕೆ  ೩-೪  ಹೊಸರಾಣಿ ಹೊರಬರುತ್ತವೆ.  ಒಂದು  ರಾಣಿಯನ್ನು  ಉಳಿಸಿಕೊಳ್ಳಬೇಕು.  ಹುಳುಗಳ  ಸಂಖ್ಯೆ  ಜಾಸ್ತಿ   ಇದ್ದಲ್ಲಿ  ಇನ್ನೊಂದು  ಜೇನು  ಸಂಸಾರವನ್ನು ಕೂಡ  ಮಾಡಿಕೊಳ್ಳಬಹುದು.  ಇದರಿಂದಾಗಿ  ಅತ್ಯಂತ  ಸುಲಭವಾಗಿ  ಜೇನು  ಸಂಸಾರವನ್ನು  ವೃದ್ದಿಸಿಕೊಳ್ಳಬಹುದು  ಎಂಬುದು  ಕಳೆದ  ನಾಲ್ಕಾರು ವರ್ಷದಿಂದ  ಕೃತಕಹಿಸ್ಸೆಯನ್ನು  ಮಾಡಿ  ಜೇನು  ಸಂಸಾರ   ಹೆಚ್ಚಿಸಿಕೊಂಡ  ಸಾಗರ  ತಾಲ್ಲೂಕಿನ   ಪ್ರಶಾಂತ  ಕೆರೇಕೈರವರ  ಅಭಿಪ್ರಾಯ. 
 ಹೆಚ್ಚಿನ  ಮಾಹಿತಿಗೆ  ಸಂಪರ್ಕಿಸಿ   ಮೋ: ೯೪೪೮೯೧೪೭೯೧ 

ಚಿತ್ರ  ಬರಹ: ಕೆ.ಆರ್.ಶರ್ಮಾ  ತಲವಾಟ
shreeshum@gmail.com


No comments: