Sunday, March 15, 2009

ದೂರವಾಣಿಯನ್ನು ದುಬಾರಿ ಏಕೆ ಮಾಡಿಕೊಳ್ಳುವಿರಿ?

ರೈತ ಪರ ಪತ್ರಿಕೆಗಳಿಗೆ, ಪುರವಣಿಗಳಿಗೆ ಒಂದು ಸಮಸ್ಯೆಯಿದೆ. ಅವು ರೈತರಿಗೆ ಅನ್ವಯಿಸುವ ಕೃಷಿ ಪದ್ಧತಿ, ಔಷಧ, ಸಾವಯವ-ಶೂನ್ಯ, ಬೀಜ.... ಇಷ್ಟಕ್ಕೇ. ಈ ಮಾಹಿತಿಗಳಿಂದ ಉಪಯೋಗವಿಲ್ಲವೆಂದಲ್ಲ. ಆದರೆ ಬಹುಪಾಲು ಸಂದರ್ಭಗಳಲ್ಲಿ ರೈತ ಸೋಲುವುದು ಸಮೃದ್ಧ ಇಳುವರಿ ತೆಗೆದೂ ಅದನ್ನು ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ. ಬಂದ ಹಣವನ್ನು ಪೂರ್ವಯೋಜಿತವಾಗಿ ನಿರ್ಧರಿಸಿ ವಿನಿಯೋಗಿಸಲು ಸೋಲುತ್ತಾನೆ. ಬದುಕಿನ ಸರ್ಕಸ್‌ನಲ್ಲಿ ನಷ್ಟಕ್ಕೊಳಗಾಗುತ್ತಾನೆ. ಅಂದರೆ ಹಣಕಾಸಿನ ನಿರ್ವಹಣಾ ಜಾಣ್ಮೆಯ ಕುರಿತು ರೈತರಿಗೆ ಪ್ರತ್ಯೇಕ ಪಾಠ ಬೇಕು. ದುರಂತವೆಂದರೆ, ಕೃಷಿ ಪತ್ರಿಕೆಗಳು, ಪುಟಗಳು ಅತ್ತ ಗಮನಹರಿಸುವುದೇ ಇಲ್ಲ.
  ರೈತರು ಎಂದಮೇಲೆ ಅವರು ಗ್ರಾಮೀಣ ಪ್ರದೇಶದವರು ಎನ್ನುವುದು ಖಚಿತ. ಈ ಹಿನ್ನೆಲೆಯಲ್ಲಿ ಹಳ್ಳಿಗರಿಗೆ ಸಿಗುವ ಸವಲತ್ತುಗಳನ್ನು ರೈತರು ಸಮರ್ಥವಾಗಿ ಬಳಸಿಕೊಂಡರೆ ಅಷ್ಟರಮಟ್ಟಿಗೆ ಕಷ್ಟದ ಭಾರ ಕಡಿಮೆಯಾದೀತು ಅಥವಾ ಅನುಕೂಲ ಹೆಚ್ಚೀತು. ಈ ಕಂತಿನಲ್ಲಿ ಆ ನಿಟ್ಟಿನಲ್ಲಿ ಯೋಚನೆಗಳಿವೆ.
ಗ್ರಾಮೀಣ ಭಾಗದ ರೈತರಿಗೆ ಬಿಎಸ್‌ಎನ್‌ಎಲ್ ಸ್ಥಿರ ಅಥವಾ ವಿಲ್ ದೂರವಾಣಿ ಲಾಭಕರ. ಕೇವಲ 50 ರೂ. ತಿಂಗಳ ಬಾಡಿಗೆಗೆ 75 ಉಚಿತ ಕರೆ ಲಭ್ಯ. ಆ ಲೆಕ್ಕದಲ್ಲಿ 75 ಪೈಸೆಗೆ ಒಂದು ಕರೆ. ಇಂದು ಅಷ್ಟೂ ಮೊಬೈಲ್ ಕಂಪನಿಗಳು 50 ಪೈಸೆಗೇ ಕರೆ ಸೌಲಭ್ಯ ಒದಗಿಸುವಾಗ ಬಿಎಸ್‌ಎನ್‌ಎಲ್ ಫೋನ್ ನಷ್ಟ ಎನ್ನುವ ಮಾತಿದೆ. ನಿಜಕ್ಕೂ ಅದು ತಪ್ಪು. ಮೊಬೈಲ್‌ನಲ್ಲಿ ನಿಮಿಷಕ್ಕೊಂದು ಕರೆ ಲೆಕ್ಕ. ಸ್ಥಿರ ದೂರವಾಣಿಯಲ್ಲಿ ಒಂದು ಸ್ಥಳೀಯ ಕರೆಗೆ ಮೂರು ನಿಮಿಷದ ಅವಕಾಶ. ಅಷ್ಟೇಕೆ, ರಾಜ್ಯದ ಯಾವುದೇ ಸ್ಥಿರ ದೂರವಾಣಿ ಮತ್ತು ಬಿಎಸ್‌ಎನ್‌ಎಲ್ ಮೊಬೈಲ್‌ಗೆ  ಕರೆ ಮಾಡಿದರೂ ಎರಡು ನಿಮಿಷಕ್ಕೆ ಒಂದು ಕರೆ. ಯಾವುದೇ ನಿಟ್ಟಿನಿಂದ ನೋಡಿದರೂ ನಮ್ಮದೇ ಜವಾಬ್ದಾರಿಯಾಗಿರುವ, ಕಣ್ಣಿಗೆ ಕಾಣದೆ ಕರಗುವ ಕರೆನ್ಸಿಗಳ ಮೊಬೈಲ್‌ಗಿಂತ ಸ್ಥಿರ ಫೋನ್ ಅನುಕೂಲ.
ಹಲವೆಡೆ ಸಾವಿರ ಲೈನ್ ದಾಟಿದ ಎಕ್ಸ್‌ಚೇಂಜ್ ಎಂಬ ಕಾರಣಕ್ಕೆ ಈ ದೂರವಾಣಿ ಗ್ರಾಹಕರಿಗೆ 100ರೂ.ಗಳ ದುಬಾರಿ ಬಾಡಿಗೆ ವಿಧಿಸಲಾಗುತ್ತದೆ. ಅಂತಹ ಗ್ರಾಹಕ ರೈತರಿಗೂ ಕೂಡ ಒಂದು ವಿಶೇಚ ಅವಕಾಶವಿದೆ. ಅವರು ಲಿಖಿತ ಅರ್ಜಿ ಸಲ್ಲಿಸಿ ‘ಗ್ರಾಮೀಣ - 75’ನ್ನು ಆಯ್ದುಕೊಂಡರೆ ಬಾಡಿಗೆ ದರ 75ಕ್ಕೆ ಇಳಿಯಲಿದೆ. ಉಚಿತ ಕರೆಗಳ ಆಜುಬಾಜಿಂದ ತಿಂಗಳಿಗೆ 300 ಕರೆ ಮಾಡುವವರಿಗಂತೂ ಗ್ರಾಮೀಣ - 75 ಲಾಭದಾಯಕವೇ.
ಬಿಎಸ್‌ಎನ್‌ಎಲ್ ಈ ವರ್ಷದುದ್ದಕ್ಕೂ ಯುಎಸ್‌ಓ ಎಂಬ ಕೇಂದ್ರ ಸರ್ಕಾರದ ಸಹಾಯ ನಿಧಿಯನ್ನು ಬಳಸಿ ಹಲವು ಯೋಜನೆಗಳನ್ನು ಪ್ರಕಟಿಸುತ್ತದೆ. ಅದರಲ್ಲಿ, ಹತ್ತು ತಿಂಗಳ ಬಾಡಿಗೆಯನ್ನು ಒಮ್ಮೆಗೇ ಪಾವತಿಸಿದರೆ ಎರಡು ತಿಂಗಳ ಬಾಡಿಗೆಯಿಂದ ವಿನಾಯ್ತಿ ಸಿಗುತ್ತದೆ. ಮುಖ್ಯವಾಗಿ, ಒಂದು ವರ್ಷದ ಕಾಲದವರೆಗೆ ಯಾವುದೇ ಬಾಡಿಗೆ ಏರಿಕೆಗೆ ಸಂಭಾವ್ಯ  ಬಿಸಿ ಈ ಚಂದಾದಾರರನ್ನು ತಟ್ಟುವುದಿಲ್ಲ. ಈ ದಿನಗಳಲ್ಲಿ ರೈತರು ಕೇಳಿದ್ದಕ್ಕೂ , ಬಿಟ್ಟಿದ್ದಕ್ಕೂ ಬಡ್ಡಿ ಲೆಕ್ಕಾಚಾರ ಹಾಕುತ್ತಾರೆ. ಆ ನಿಟ್ಟಿನಲ್ಲಿ ಯೋಚಿಸಿದರೂ ಈ ಮುಂಗಡ ಬಾಡಿಗೆ ಪಾವತಿಯ ಮೊತ್ತಕ್ಕೆ ಶೇ.೨೦ರ ದರದಲ್ಲಿ ಬಡ್ಡಿ ಕೊಟ್ಟಂತಾಗುತ್ತದೆ! 
ಸ್ವಾರಸ್ಯವೆಂದರೆ, ತಿಂಗಳಿಗೆ150ಕ್ಕಿಂತ ಹೆಚ್ಚು ಕರೆ ಮಾಡುವ ಅಥವಾ 200 ರೂ.ಗಿಂತ ಹೆಚ್ಚಿನ ಬಿಲ್ ಪಡೆಯುವ ಗ್ರಾಮೀಣ ಚಂದಾದಾರ ಎರಡೆರಡು ಸ್ಥರ ದೂರವಾಣಿ ಅಳವಡಿಸಿಕೊಂಡರೇ ಆತನ ಬಿಲ್‌ನಲ್ಲಿ ಉಳಿತಾಯವಾಗುತ್ತದೆ! ಉಚಿತ ಕರೆ ನಂತರದ 50 ಕರೆಗಳ ದರ 80 ಪೈಸೆ ಮತ್ತು ಆನಂತರ ಒಂದು ರೂಪಾಯಿ. ಅಂದರೆ ತೆರಿಗೆ ಸೇರಿದ ಮೇಲೆ 86ಪೈಸೆಗಿಂತ ಕಡಿಮೆಗೆ ಕರೆ ಮಾಡಲಾಗದು. ಅದೇ ಎರಡು ಪ್ರತ್ಯೇಕ ಗ್ರಾಮೀಣ ದೂರವಾಣಿ ಸಂಪರ್ಕದಿಂದ ತಿಂಗಳಿಗೆ ತಲಾ 75ಕರೆಯಂತೆ ಖರ್ಚು ಮಾಡಿದರೂ ಒಂದು ಕರೆಗೆ ವೆಚ್ಚವಾಗುವುದು 74 ಪೈಸೆ. ಲಘುವಾಗಿ ಇದೊಂದು ಸರಳ ಲೆಕ್ಕಾಚಾರ, ಏನುಳಿದೀತು ಮಹಾ ಎನ್ನದಿರಿ. ಪ್ರತಿತಿಂಗಳುಉಳಿಯುವ 15-20 ರೂ. ಪರಿಣಾಮ ನಗಣ್ಯವಂತೂ ಅಲ್ಲ. ಒಂದಲ್ಲ ಒಂದು ಫೋನ್ ಕೆಟ್ಟರೂ ಪರ್ಯಾಯವಿರುವ ನಿಶ್ಚಿಂತೆ ಬೇರೆ. ಸ್ವತಃ ನಾನು ಈ ಸೂತ್ರವನ್ನು ಅನುಸರಿಸುತ್ತಿರುವುದರಿಂದಲೇ ಖಚಿತವಾಗಿ ಹೇಳಲು ಸಾಧ್ಯವಾಗಿದೆ.
ಇದರ ಹೊರತಾಗಿಯೂ ಹಲವು ಯೋಜನೆಗಳನ್ನು ಆಗಾಗ್ಗೆ ಬಿಎಸ್‌ಎನ್‌ಎಲ್ ಪ್ರಕಟಿಸುತ್ತಿರುತ್ತದೆ. ಆ ಸುದ್ದಿ ತಿಳಿಯಬೇಕೆಂಬ ಕುತೂಹಲ, ಆಯ್ದುಕೊಳ್ಳುವ ಚಾಕಚಕ್ಯತೆ ನಮ್ಮದಾಗಬೇಕು. ಕೆಲದಿನಗಳ ಹಿಂದೆ ಮಹಿಳೆಯರಿಗೆ ಶೇ.25 ರಿಯಾಯ್ತಿಯಲ್ಲಿ , ಠೇವಣಿ - ಸ್ಥಾಪನಾ ವೆಚ್ಚ ಕೂಡ ಇಲ್ಲದೆ ಹೊಸ ಫೋನ್ ಸಂಪರ್ಕ ನೀಡಲಾಗಿತ್ತು. ಅಂತೆಯೇ ಈಗ ರಾಜ್ಯದ ಹಲವಡೆ ಹಳ್ಳಿ ಗ್ರಾಹಕರಿಗಾಗಿ ಪ್ರಕಟಗೊಂಡಿರುವ ಹೊಸ ಯೋಜನೆಯ ಪ್ರಕಾರ, 250ರೂ. ಕಟ್ಟಿದರೆ ಎರಡು ವರ್ಷ ಯಾವುದೇ ಬಾಡಿಗೆ ಇಲ್ಲದೆ, ಆರಂಭೀ ಠೇವಣಿ, ಸ್ಥಾಪನಾ ವೆಚ್ಚ ಇಲ್ಲದ ಹೊಸ ಫೋನ್‌ನ್ನು ಬಿಎಸ್‌ಎನ್‌ಎಲ್ ನೀಡುತ್ತಿದೆ. ಯೋಜನೆ ಮಾರ್ಚ್ 15ಕ್ಕೆ ಕೊನೆಗೊಳ್ಳಲಿದೆ. ಗಮನಿಸಬೇಕಾದುದೆಂದರೆ, ಇಂತಹ ಹಳ್ಳಿಗರಿಗೆ ಲಾಭದಾಯಕ ಯೋಜನೆಗಳು 2009ರ ತುದಿಯವರೆಗೂ ಒಂದಲ್ಲಾ ಒಂದು ಚಾಲ್ತಿಗೆ ಬರುತ್ತವೆ. ನಾವು, ಹಳ್ಳಿಗರು ಹತ್ತಿರದ ಬಿಎಸ್‌ಎನ್‌ಎಲ್ ಕಛೇರಿಯನ್ನು ಸಂಪರ್ಕಿಸುತ್ತಿರಬೇಕು ಅಥವಾ ಇಂಟರ್‌ನೆಟ್‌ನಲ್ಲಿ ಬಿಎಸ್‌ಎನ್‌ಎಲ್ ವೆಬ್‌ಸೈಟ್‌ನಲ್ಲಿ ಮಾಹಿತಿ ಪಡೆಯಬಹುದು. ಇನ್ನೂ ಸರಳ ವಿಧಾನವೆಂದರೆ, 1500 ಎಂಬ ದೂರವಾಣಿಗೆ ಕರೆ ಮಾಡಿ ವಿಚಾರಿಸಬಹುದು. ಈ ಸಂಖ್ಯೆಗೆ ಯಾವುದೇ ಕರೆ ವೆಚ್ಚ ಇಲ್ಲ.
ಈ ಕರೆ, ಕರೆ ವೆಚ್ಚ, ಪಲ್ಸ್ ದರ ಇಂತಹ ಮೂಲಭೂತ ಮಾಹಿತಿಗಳನ್ನು ನಾವು ಅರಿತುಕೊಳ್ಳಬೇಕು. ಎಲ್ಲಿಗೆ ಕರೆ ಮಾಡಿದರೆ ಎಷ್ಟು ದರ ಬಿದ್ದೀತು ಎಂಬ ಅರಿವಾದರೂ ನಮ್ಮಲ್ಲಿರಬೇಕು. ಒಟ್ಟಾರೆ ಕರೆ ಮಾಡುತ್ತ ಹೋಗುವ ಬದಲು, ಬಿಎಸ್‌ಎನ್‌ಎಲ್‌ನ 1962ಗೆ ಡಯಲ್ ಮಾಡಿ ನಮ್ಮ ಬಿಲ್ ಮೀಟರ್ ಎಷ್ಟಾಗಿದೆ ಎಂಬ ದಾಖಲೆಯನ್ನು ಪಡೆಯಬಹುದು. ಇದೂ ಉಚಿತ ದೂರವಾಣಿ.
ರೈತನ ಬದುಕಿನಲ್ಲಿ ಇಂತಹ ಅರಿವು, ಉಳಿತಾಯಗಳು ಅವನ ಅಭಿವೃದ್ಧಿಗೆ ಪೂರಕವಾಗಬಹುದೇ? ಚರ್ಚೆಯಾಗಲಿ.

-ಮಾವೆಂಸ 
ಇಲ್ಲಿನ ಮಾಹಿತಿಗಳ ಬಗ್ಗೆ  ವಿವರ ಬೇಕಿದ್ದರೆ ಸಂಜೆ 8ರ ನಂತರ ಸಂಪರ್ಕಿಸಬಹುದು. ಫೋನ್-08183 236068, 296543, 9886407592  ಇ ಮೇಲ್- mavemsa@gmail.com

Sunday, March 8, 2009

ಮಾಡಿ ನೋಡಿ ಮಿನಿ-ಡೈಜೆಸ್ಟರ್


ಸಣ್ಣ ಹಿಡುವಳಿದಾರರಿಗೆ ಉಪಯುಕ್ತವಾದ ಡೈಜೆಸ್ಟರ್‌ ಒಂದನ್ನು ಉಪಯೋಗಿಸುತ್ತಿದ್ದಾರೆ, ಬೆಂಗಳೂರು ಸಮೀಪದ ಮರಸರಹಳ್ಳಿಯ ಸಾವಯವ ಕೃಷಿಕ ಎನ್‌. ಆರ್‌. ಶೆಟ್ಟಿ. ಎರೆಡು ಎಕರೆಯ ಸಣ್ಣ ಕೃಷಿ ಕ್ಷೇತ್ರ. ಜೀವ ವೈವಿಧ್ಯ ತುಂಬಿದ, ನೂರಾರು ಮರಗಳಿರುವ ಕೃಷಿ ಭೂಮಿ. ಕೆಂಪು ಚೆರ್ರಿ, ದಾಳಿಂಬೆ, ಸೀತಾಫಲ, ನೆಲ್ಲಿ ಮೊದಲಾದ ಹಣ್ಣಿನ ಗಿಡಗಳು, ರಾಗಿ, ತೊಗರಿ, ಅವರೆ ಮುಂತಾದ ಮಳೆ ಆಶ್ರಿತ ಬೆಳೆಗಳು. ತರಕಾರಿಗಾಗಿ ಏರುಮಡಿಗಳು. ಇದು ಶೆಟ್ಟಿಯವರ ಕನಸಿನ ನವ ನಂದನ.
ಎಲ್ಲಾ ಸಾವಯವ ಕೃಷಿಕರ ಬಾಯಲ್ಲೂ ಡೈಜೆಸ್ಟರ್‌ ಸುದ್ದಿ. ಬೆಳಗಾಂನ ಕೃಷಿಕರೊಬ್ಬರು ತೊಟ್ಟಿ ಕಟ್ಟಿ ಅದರಲ್ಲಿ ಕೃಷಿತ್ಯಾಜ್ಯಗಳು, ಹೊಂಗೆ ಎಲೆ, ಬೇವಿನ ಎಲೆಗಳು, ಗ್ಲಿರಿಸೀಡಿಯ, ಮೇಲಿನಿಂದ ಸಗಣಿ ಗಂಜಲಗಳ ಮಿಶ್ರಣ ಹಾಕಿ ಚೆನ್ನಾಗಿ ಕಳೆಯಿಸಿ ಗೊಬ್ಬರ ಮಾಡುತ್ತಾರಂತೆ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ಹಲವರು ಅದನ್ನು ನೋಡಿಬರಲೂ ಉತ್ಸುಕತೆ ತೋರಿದರು.
ಶೆಟ್ಟಿ ದಂಪತಿಗಳಿಗೂ ಅದನ್ನು ನೋಡಿ ಬಂದ ನಂತರ ಹಗಲೂ ರಾತ್ರೆ ಅದರದ್ದೇ ಚಿಂತೆ. ಆದರೆ ಮಾಡುವುದೇನು? ಆ ಡೈಜೆಸ್ಟರ್‌ ಭಾರಿ ದೊಡ್ಡದು, ಹತ್ತಿಪ್ಪತ್ತು ಎಕರೆ ಇರುವಂತಹವರಿಗೆ ಸರಿ. ಎರೆಡೆಕರೆ ಕೃಷಿಭೂಮಿಗೆ ಹೇಗೆ? ಏನಾದರೂ ಮಾಡಲೇಬೇಕೆಂಬ ತವಕ. ಮನಸ್ಸೊಂದಿದ್ದರೆ ಮಾರ್ಗ ತಾನೇ ತೆರೆದುಕೊಳ್ಳುವುದಂತೆ. ಶೆಟ್ಟಿಯವರೂ ಇದಕ್ಕೆ ಹೊರತಲ್ಲವಲ್ಲ.
ಶೆಟ್ಟಿಯವರು ಮಾಡಿದ್ದೂ ಅದನ್ನೇ! ಸಿಮೆಂಟಿನ ಕುಂಡಗಳನ್ನು ಮಾಡುವವರನ್ನು ವಿಚಾರಿಸಿದರು. ಕೆಳಭಾಗದಲ್ಲಿ ಸಣ್ಣ ತೂತಿರುವಂತೆ ಎರೆಡು ತೊಟ್ಟಿಗಳು ಸಿದ್ದವಾದವು. ಮೂರನೆಯ ತೊಟ್ಟಿಗೆ ತೂತಿಲ್ಲ. ಮೊದಲೆರಡು ತೊಟ್ಟಿಗಳ ತಳಭಾಗದಲ್ಲಿ ದಪ್ಪ ಜಲ್ಲಿ ಹರಡಿದರು. ಅದರ ಮೇಲೆ ಸಣ್ಣ ಬಟಾಣಿ ಜಲ್ಲಿ, ಅದರ ಮೇಲೆ ಮರಳು. ಮರಳಿನ ಮೇಲೊಂದು ಪ್ಲಾಸ್ಟಿಕ್‌ ಮೆಶ್‌. ಅದರ ಮೇಲೆ ಕೃಷಿ ತ್ಯಾಜ್ಯ, ಮೇಲೆ ಸಗಣಿ ಗಂಜಲಗಳ ಮಿಶ್ರಿತ ದ್ರಾವಣ.
ಮೊದಲ ತೊಟ್ಟಿಯಲ್ಲಿಳಿದ ಕಶಾಯ ಎರಡನೆಯ ತೊಟ್ಟಿಗೆ ಬೀಳಬೇಕು. ಅಂದರೆ ಮೊದಲನೆಯ ತೊಟ್ಟಿ ಸ್ವಲ್ಪ ಎತ್ತರದಲ್ಲಿರಬೇಕು. ಆಲೋಚನೆ ಬಂದಿದ್ದೇ ತಡ, ಕಲ್ಲು ಮಣ್ಣು ಸೇರಿಸಿ ನೆಲ ಎತ್ತರಿಸಿ ಸಮತಟ್ಟು ಮಾಡಿದರು. ಇಲ್ಲಿ ಮೊದಲ ತೊಟ್ಟಿ ಇಟ್ಟರು. ಕೆಳಗಿನ ತೂತಿಗೆ ಒಂದು ಕೊಳವೆ ಜೋಡಿಸಿ ಅದು ಸೋರದಂತೆ ಸಿಮೆಂಟಿನಿಂದ ಭದ್ರ ಪಡಿಸಿದರು. ಆ ಕೊಳವೆಯಿಂದ ಬರುವ ದ್ರಾವಣ ಎರಡನೆಯ ತೊಟ್ಟಿಯ ಮೇಲ್ಭಾಗದಲ್ಲಿ ಬೀಳುವ ಹಾಗಿರಬೇಕು. ಅದಕ್ಕೆ ಸರಿಹೊಂದುವ ಎತ್ತರದಲ್ಲಿ ಎರಡನೆಯ ತೊಟ್ಟಿ ಇಟ್ಟರು. ಅದರ ತಳದ ಕೊಳವೆಯಿಂದ ಬಂದ ನೀರು ಮೂರನೆಯ ತೊಟ್ಟಿಗೆ.
ಎರೆಡೂ ತೊಟ್ಟಿಗಳಲ್ಲಿ ಶೋಧಕಗಳಿರುವುದರಿಂದ ಮೂರನೆಯ ತೊಟ್ಟಿಯಲ್ಲಿರುವ ದ್ರಾವಣದಲ್ಲಿ ಕಸ ಕಡ್ಡಿಗಳಿರುವುದಿಲ್ಲ. ಸಿಂಪರಣೆಗೆ ಸಹ ಸೂಕ್ತ.
ಕಾರ್ಯವೈಖರಿ: ಮೊದಲ, ಮೇಲಿನ ತೊಟ್ಟಿಯಲ್ಲಿ ಕೃಷಿತ್ಯಾಜ್ಯ, ಸಗಣಿ ಬಗ್ಗಡ, ಗಂಜಲ ಎಲ್ಲವನ್ನೂ ಚೆನ್ನಾಗಿ ಬೆರೆಸಿ ಹಾಕಬೇಕು. ನಂತರ ತೊಟ್ಟಿಯ ಅಳತೆಗನುಸಾರವಾಗಿ ನೀರನ್ನು ಹಾಕಿ ಕಲಕಬೇಕು. ( ತೊಟ್ಟಿಗಳನ್ನು 5ಲೀ, 10ಲೀ, 15ಲೀ ಅಳತೆಗೆ ಮಾಡಿಸಬಹುದು.)ಪ್ರತಿ ದಿನ ಬೆಳಗ್ಗೆ ಸಾಯಂಕಾಲ ಕಲಕಬೇಕು. ಮೊದಲಬಾರಿ ಹಾಕಿದಾಗ 8ದಿನ ಕಳಿಯಲು ಬಿಡಬೇಕು. ಅಲ್ಲಿಯವರೆಗೆ ಕೊಳವೆಯ ಬಾಯಿ ಮುಚ್ಚಿರ ಬಹುದು. ನಂತರ ಅದನ್ನು ತೆಗೆದಾಗ ಮೇಲಿನ ತೊಟ್ಟಿಯ ದ್ರಾವಣ ನಿಧಾನವಾಗಿ ಶೋಧಕದೊಳಕ್ಕಿಳಿದು ಎರಡನೆಯ ತೊಟ್ಟಿಗೆ ಬೀಳಲಾರಂಭಿಸುತ್ತದೆ. ಅಲ್ಲಿಯೂ ಮರಳು ಜಲ್ಲಿ ಇರುವುದರಿಂದ ಮತ್ತೊಂದು ಬಾರಿ ಸೋಸಿಕೊಂಡು 3ನೆಯ ಸಂಗ್ರಹಣಾ ತೊಟ್ಟಿಗೆ ಬೀಳುತ್ತದೆ. ಈ ದ್ರಾವಣಕ್ಕೆ 1;10ರ ಅನುಪಾತದಲ್ಲಿ ನೀರು ಬೆರೆಸಿ ಸಿಂಪರಣೆ ಮಾಡಬಹುದು.
ಶೆಟ್ಟಿಯವರ ತೋಟದಲ್ಲಿ ಮರಗಳು ಇರುವುದರಿಂದ ಪ್ರತಿ ಗಿಡದ ಬುಡಕ್ಕೆ ಒಂದು ಲೀಟರ್‌ ದ್ರಾವಣ ಹಾಕುತ್ತಾರೆ. ಸಿಂಪರಣೆ ಮಾಡುವುದಾದರೆ 1/4ಎಕರೆ ಪ್ರದೇಶಕ್ಕೆ ಇಷ್ಟು ದ್ರಾವಣ ಸಾಕು ಎನ್ನುವುದು ಶೆಟ್ಟಿಯವರ ಅನಿಸಿಕೆ. ಆಶ್ಯಕತೆಗೆ ಅನುಸಾರವಾಗಿ ಮೇಲಿನ ತೊಟ್ಟಿಗೆ ನೀರು ಹಾಕಬೇಕು.
300ರೂ ನಿಂದ 500ರೂ ಖರ್ಚಿನಲ್ಲಿ 3 ತೊಟ್ಟಿಗಳನ್ನು ಮಾಡಿಸಬಹುದು. ದೊಡ್ಡ ಡೈಜೆಸ್ಟರ್‌ಗೆ 30ರಿಂದ 40ಸಾವಿರ ರೂಗಳು ಬೇಕಾದೀತು. ಅಲ್ಲದೆ ನಾವು ಖರ್ಚುಮಾಡಿದ ನಂತರವೇ ಸರ್ಕಾರದಿಂದ ಸಬ್ಸಿಡಿ ದೊರಕುವುದು. ಸಣ್ಣ ಹಿಡುವಳಿದಾರರಿಗೆ ಈ ಮಿನಿ ಡೈಜೆಸ್ಟರ್‌ ಸೂಕ್ತ. ಸಾಲದ ಹಂಗಿಲ್ಲ, ಸಬ್ಸಿಡಿಗಾಗಿ ಅಲೆದಾಡಬೇಕಿಲ್ಲ. ಯಾರು ಬೇಕಾದರೂ ಮಾಡಿಕೊಳ್ಳಬಹುದಾದ ಮಿನಿ ಡೈಜೆಸ್ಟರ್‌ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬಹುದು. ಎನ್‌.ಆರ್‌. ಶೆಟ್ಟಿ. 23330999.

-ಅನುಸೂಯ ಶರ್ಮ

Tuesday, March 3, 2009

ಬಯೋ ಅನಿಲ ಸ್ಥಾವರ ರೈತಗೆ ವರ, ಸಬ್ಸಿಡಿಗೆ ಬರ!


ಕೃಷಿಕರಿಗಾಗಿ ರೂಪಿಸಾಗಿರುವ ರಾಷ್ಟ್ರೀಯ ತೋಟಗಾರಿಕಾ ಸಹಾಯಧನ ಯೋಜನೆ ಸಾರ್ಥಕ ಕ್ರಮಗಳಲ್ಲೊಂದು. ಇದನ್ನು ದೊಡ್ಡ ಸಂಖ್ಯೆಯ ರೈತರು ಬಳಸಿಕೊಂಡು ಶೇ. 50ರಷ್ಟು ಸಹಾಯಧನ ಪಡೆದಿದ್ದಾರೆ. ಈ ಸಹಾಯಧನ ಯೋಜನೆಯ ವ್ಯಾಪ್ತಿಯಲ್ಲಿ ಎರೆಗೊಬ್ಬರ ತಯಾರಿ ಸ್ಥಾವರ ಮತ್ತು ಬಯೋ ಡೈಜಸ್ಟರ್‌ನ್ನು ಸೇರಿಸಲಾಗಿದೆ. ರೈತರ ಬದುಕಿಗೆ ತುಂಬಾ ಪೂರಕವಾಗಿರುವ, ಮುಖ್ಯವಾಗಿ ಪರಿಸರ ರಕ್ಷಣೆಯಲ್ಲಿ ಅತ್ಯುತ್ತಮ ಪಾತ್ರ ನಿರ್ವಹಿಸುತ್ತಿರುವ ಬಯೋ ಅನಿಲ ಸ್ಥಾವರ ನಿರ್ಮಾಣವನ್ನು ಈ ಯೋಜನೆ ವ್ಯಾಪ್ತಿಗೆ ಸೇರಿಸದೆ ಇರುವುದು ದುರಂತವೇ ಸರಿ.
ನಿಜಕ್ಕೂ ಎಲ್ಲಿ ಅನ್ಯಾಯವಾಗಿದೆ ಎಂಬ ಅರಿವಿಗಾಗಿಯೇ ಇಲ್ಲಿ ಬಯೋ ಅನಿಲ ಸ್ಥಾವರದ ಅನುಕೂಲಗಳತ್ತ ಇಲ್ಲಿ ಬೆಳಕು ಚೆಲ್ಲಲಾಗಿದೆ. ಪ್ರತಿಯೊಬ್ಬ ರೈತ ಕೃಷಿಯೊಂದಿಗೆ ಪಶುಸಂಗೋಪನೆಯನ್ನೂ ಸಾಮಾನ್ಯವಾಗಿ ನಡೆಸುವುದರಿಂದ ಬಯೋ ಅನಿಲಕ್ಕೆ ಅಗತ್ಯವಾದ ಕಚ್ಚಾ ಸಾಮಗ್ರಿಯಾದ ಸಗಣಿ ಆತನಲ್ಲೇ ಲಭ್ಯವಿರುತ್ತದೆ. ಬಯೋ ಅನಿಲವು ಒಂದು ಶಕ್ತಿ ರೂಪದಲ್ಲಿ ಲಭ್ಯವಾಗುವುದರಿಂದ ಹಲವು ಯಾಂತ್ರಿಕ ಸಲಕರಣೆಗಳಿಗೆ ಇಂಧನವಾಗಿ ಬಳಕೆಯಾಗುತ್ತಿದೆ.
ಪ್ರಮುಖವಾಗಿ ಬಯೋ ಅನಿಲದ ಬಳಕೆ ಅಡುಗೆ ಮನೆಯಲ್ಲಿ. ಆಹಾರ ಬೇಯಿಸಲು ನಾವು ಬಳಸುವ ಕಟ್ಟಿಗೆ, ವಿದ್ಯುತ್‌ ಹೀಟರ್‌, ಎಲ್‌ಪಿಜಿ ಗ್ಯಾಸ್‌ಗೆ ಅತ್ಯುತ್ತಮ ಪರ್ಯಾಯವಿದು. ಅಂದರೆ ಬಯೋ ಅನಿಲ ಸ್ಥಾವರಗಳಿಗೆ ಸಬ್ಸಿಡಿ ನೀಡಿ ಉತ್ತೇಜಿಸುವುದು ಸರ್ಕಾರದ ದೃಷ್ಟಿಯಿಂದ ದೂರಗಾಮಿ ಸಫಲತೆಗೆ ಅಡಿಪಾಯವಾಗುತ್ತದೆಂದು ದೃಢವಾಗಿ ಹೇಳಬಹುದು.
ಅಡುಗೆ ಅನಿಲ, ಸೀಮೆಎಣ್ಣೆ, ವಿದ್ಯುತ್‌ಗಳಲ್ಲಾಗುವ ಉಳಿತಾಯದ ಲಾಭ ಸರ್ಕಾರದ ಖಜಾನೆಗೆ. ಇಂದು 26 ಸಾವಿರ ಕೋಟಿ ರೂ.ಗಳ ವಾರ್ಷಿಕ ಸಬ್ಸಿಡಿಯನ್ನು ಈ ಕ್ಷೇತ್ರಕ್ಕೆ ಸರ್ಕಾರ ನೀಡುತ್ತದೆ ಎನ್ನುವುದನ್ನು ಗಮನಿಸಿದರೆ, ಬಯೋ ಅನಿಲ ಸ್ಥಾವರಕ್ಕೆ ಸರ್ಕಾರ ಸಹಾಯಧನ ನೀಡಿ ಉತ್ತೇಜಿಸಿದರೆ, ಆಗುವ ಬದಲಾವಣೆಯನ್ನು ಕ್ರಾಂತಿಕಾರಕ ಎಂದರೆ ಉತ್ಪ್ರೇಕ್ಷೆಯೇನಿಲ್ಲ.
ಬಯೋ ಅನಿಲದಿಂದ ಫ್ರಿಜ್‌ ನಿರ್ವಹಿಸುವ ತಾಂತ್ರಿಕತೆ ಯಶಸ್ವಿಯಾಗಿದೆ. ಶಿರಸಿ ತ್ಯಾಗಲಿಯ ಸುಬ್ರಾಯರು ಹಿಂದೆ ಹಡಗಿನಲ್ಲಿದ್ದ ಫ್ರಿಜ್‌ ಒಂದನ್ನು ತಂದು ಅದನ್ನು ಬಯೋ ಅನಿಲದಲ್ಲಿ ದುಡಿಸಿದ್ದರು. ಅದರ ವ್ಯಾಪಕ ಬಳಕೆ ಇನ್ನಷ್ಟೇ ಆಗಬೇಕಿದೆ. ಇತ್ತೀಚೆಗೆ ಎಲ್‌ಪಿಜಿ ಬಳಸಿ ನೀರು ಕಾಯಿಸುವ ಯಂತ್ರ ಬಂದಿದೆಯಷ್ಟೆ. ಅದರಲ್ಲಿ ಕೆಲ ತಾಂತ್ರಿಕ ಪರಿವರ್ತನೆ ಮಾಡಿ ಎಲ್‌ಪಿಐ ಬದಲು ಬಯೋ ಅನಿಲ ಬಳಸುವ ತಂತ್ರ ನೂರಕ್ಕೆ ನೂರು ಸಫಲವಾಗಿದ್ದು, ಈಗಾಗಲೇ ಕೃಷಿಕರನ್ನು ಆಕರ್ಷಿಸಿದೆ. ಇದರಿಂದ ದೀಪ ಬೆಳಗಿಸುವ ಸಾಧನವಂತೂ ಹಿಂದಿನಿಂದ ಜಾರಿಯಲ್ಲಿದೆ.
ಬಯೋ ಅನಿಲದಿಂದ ನೀರಾವರಿ ಪಂಪ್‌ ನಡೆಸಬಹುದಾದ ವ್ಯವಸ್ಥೆಯನ್ನು ಜಾರಿಗೊಳಿಸಲು ಸಾಧ್ಯವಿದೆ. ಕಳೆದ ಕೆಲವು ವರ್ಷಗಳಿಂದ ಸುಸೂತ್ರವಾಗಿ ರೈತರು ಇದನ್ನು ಬಳಸುತ್ತಿರುವುದೇ ಸಫಲತೆಗೆ ಸಾಕ್ಷಿ ಎನ್ನಬಹುದೇನೋ.
ನಾಣ್ಯದ ಇನ್ನೊಂದು ಮಗ್ಗುಲನ್ನೂ ಇಲ್ಲಿಯೇ ವಿವರಿಸಬೇಕು. ಈಗಾಗಲೇ ಬಯೋ ಅನಿಲ ಸ್ಥಾವರ ಮಾಡಿಕೊಂಡವರು ದೈನಂದಿನ ಅಡುಗೆಗೆ ಸಾಕಷ್ಟು ಅನಿಲ ದೊರಕದೆ ಬಳಲುತ್ತಿದ್ದಾರೆ. ಇದು ಬಯೋ ಅನಿಲ ಸ್ಥಾವರ ಸ್ಥಾಪನೆಯನ್ನು ನಿರುತ್ತೇಜಿಸಿದೆ. ವಾಸ್ತವ ಬೇರೆ. ತಪ್ಪು ಬಯೋ ಅನಿಲದಲ್ಲ, ಕಚ್ಚಾ ವಸ್ತುಗಳದ್ದಲ್ಲ. ದೀನಬಂಧು, ಕಾಮಧೇನು ತೇಲುವ ಫೈಬರ್‌ ಡ್ರಮ್‌ ಮುಂತಾದ ಈ ಹಿಂದಿನ ಸ್ಥಾವರದ ಮಾದರಿಗಳಲ್ಲಿಯೇ ದೋಷವಿದೆ. ಇವುಗಳಲ್ಲಿ ಶೇ.100ರಲ್ಲಿ ಬಯೋ ಅನಿಲ ಉತ್ಪತ್ತಿಯಾಗದಿರುವುದರಿಂದಲೇ ಗ್ರಾಹಕ ಕಡಿಮೆ ಅನಿಲ ಲಭ್ಯತೆಗೆ ತೃಪ್ತಿಪಡುವಂತಾಗಿದೆ. ಆದರೆ ಇದೀಗ ಶಿವಮೊಗ್ಗ ಸಾಗರದ ವೀ.ನಾ.ಕೃಷ್ಣಮೂರ್ತಿಯವರು ವಿನ್ಯಾಸಗೊಳಿಸಿರುವ ಅಕ್ಷಯ ಜೈವಿಕ ಅನಿಲ ಯಂತ್ರ ಸ್ಥಾವರ ಪರಿಹಾರವೆನ್ನಬಹುದು. ಕೇವಲ ಒಂದು ಬುಟ್ಟಿ ಸಗಣಿ, ಇತರ ಕಚ್ಚಾವಸ್ತು ಬಳಸಿದರೆ ಸಾಕು, ಐದು ಜನರ ಒಂದು ಕುಟುಂಬ ಅಡುಗೆಯ ಇಂಧನದ ಸಮಸ್ಯೆ `ಅಕ್ಷಯದಲ್ಲಿ ಹುಟ್ಟುವುದಿಲ್ಲ.
ಬಯೋ ಡೈಜೆಸ್ಟರ್‌ಗಿಂತ ಅನಿಲ ಸ್ಥಾವರ ಹೆಚ್ಚು ಉಪಯೋಗಿ. ಡೈಜಿಸ್ಟರ್‌ನಲ್ಲಿ ದ್ರಾವಣ (ಡಿಕಾಕ್ಷನ್‌) ಮಾತ್ರ ಲಭ್ಯ. ಇದರಲ್ಲಿ ಉತ್ಪತ್ತಿಯಾಗುವ ಮಿಥೇನ್‌ ಅನಿಲ ವ್ಯರ್ಥವಾಗಿ ವಾಯುಮಂಡಲವನ್ನು ಸೇರುತ್ತದೆ. ವಾಸ್ತವವಾಗಿ, ಮಿಥೇನ್‌ ಅನಿಲ ಪರಿಸರಕ್ಕೆ ಬೆರೆಯುವುದು. ಕ್ಷೇಮವಲ್ಲ. ಬಯೋಗ್ಯಾಸ್‌ ಶಕ್ತಿಯ ಮೂಲವಾದುದರಿಂದ ಯಾವುದೇ ಸಂದರ್ಭದಲ್ಲಿ ಇದನ್ನು ವಿದ್ಯುತ್‌ನ್ನಾಗಿಯೂ ಪರಿವರ್ತಿಸಿಕೊಳ್ಳಬಹುದು.
ಪ್ರಸ್ತುತ ಬೇರೊಂದು ಯೋಜನೆಯಡಿ ಗೋ ಅನಿಲ ಸ್ಥಾವರಕ್ಕೆ ಐದು ಸಾವಿರ ರೂ.ಗಳ ಸಬ್ಸಿಡಿ ಸಿಕ್ಕೀತು ಎಂದು ಕೇಳಿದ್ದೇವೆ. ಪ್ಲಾಂಟ್‌ ಬಗ್ಗೆ ಯಾವುದೇ ಷರತ್ತುಗಳಿಲ್ಲದಿರುವುದರಿಂದ ಇದೊಂದು ಅಸಮರ್ಪಕ ಕ್ರಮ. ಮೊತ್ತವೂ ತುಂಬಾ ಕನಿಷ್ಟವಾಗಿದೆ. ಹಾಗಾಗಿ ಎನ್‌ಹೆಚ್‌ಬಿ ಮೂಲಕ ಇದನ್ನು 30 ಸಾವಿರ ರೂ.ಗಳ ಸಹಾಯಧನದ ವ್ಯಾಪ್ತಿಗೆ ಸೇರಿಸಿದರೆ ಅಷ್ಟರಮಟ್ಟಿಗೆ ರೈತರಿಗೇ ಅನುಕೂಲವಾಗುತ್ತದೆ.
ಇದೀಗ ರಾಜ್ಯದಲ್ಲಿ ಚಾಲ್ತಿಗೆ ಬಂದಿರುವ ಸಾವಯವ ಕೃಷಿ ಮಿಷನ್‌ನ ಅಧ್ಯಕ್ಷರಾದ ಆ.ಶ್ರೀ. ಆನಂದ್‌, ಸರ್ಕಾರದ ಅಧಿಕಾರಿಗಳು, ವಿಜ್ಞಾನಿಗಳಲ್ಲಿ ರಾಷ್ಟೀಯ ತೋಟಗಾರಿಕಾ ಯೋಜನೆಯ ವ್ಯಾಪ್ತಿಯಲ್ಲಿ ಬಯೋ ಅನಿಲ ಸ್ಥಾವರ ಯೋಜನೆಯನ್ನು ಸೇರಿಸಲು ರೈತ ಸಮುದಾಯದ ಪರವಾಗಿ ಕಾರ್ಯೋನ್ಮುಖರಾಗಬೇಕಾದುದು ಇಂದಿನ ಅಗತ್ಯವಾಗಿದೆ.
ಮಾವೆಂಸ

Friday, February 27, 2009

ಮೌಲ್ಯವರ್ಧನೆ


ಅದು ಪುಡಿ. ಈರುಳ್ಳಿಯ ಪುಡಿ. ನಿಮಗೆ ಈರುಳ್ಳಿಯ ಪುಡಿ ಬೇಡ ಈರುಳ್ಳಿಯೇ ಬೇಕು ಅನಿಸುತ್ತದೆ. ವೆರಿ ಸಿಂಪಲ್‌. ಆ ಪುಡಿಯನ್ನು ನೀರಿಗೆ ಹಾಕಿದರಾಯಿತು. ಈರುಳ್ಳಿ ರೆಡಿ.
ಇದೇನು ಶಂಕರ್‌ ಅವರ ಮ್ಯಾಜಿಕ್‌ ಅಲ್ಲ. ಅಥವಾ ಮಂಕುಬೂದಿಯ ಮಂತ್ರ ಅಲ್ಲ. ವಾಸ್ತವ. ಕಾಲ ಬದಲಾಗಿದೆ ಎನ್ನುವುದಕ್ಕೆ ಸಾಕ್ಷಿಯೋ ಎಂಬಂತೆ ಈಗ ಈರುಳ್ಳಿ ಪುಡಿಯನ್ನು ನೀರಲ್ಲಿ ಹಾಕಿ ಈರುಳ್ಳಿಯ ಮೂಲರೂಪವನ್ನು ಪಡೆಯಬಹುದು. ಈರುಳ್ಳಿ ಮಾತ್ರವಲ್ಲ, ಬೆಂಡೆಕಾಯಿ, ಬೆಳ್ಳುಳ್ಳಿ ಮುಂತಾದ ತರಕಾರಿ ಹಾಗೂ ಹಣ್ಣುಗಳಿಗೂ ಇದೇ ಕಥೆ ಅನ್ವಯಿಸುತ್ತದೆ.
ಹೌದು, ಮೌಲ್ಯವರ್ಧನೆ ಎಂಬ ಪರಿಕಲ್ಪನೆ ಇದನ್ನೆಲ್ಲ ಈಗ ಸಾಧ್ಯವಾಗಿಸಿದೆ. ಇದೂ ಮೌಲ್ಯವರ್ಧನೆಯ ಒಂದು ರೂಪ. ಹೀಗೆ ವಿವಿಧ ಆಹಾರ ಪದಾರ್ಥಗಳ ಮೌಲ್ಯವರ್ಧನೆ ಮಾಡುವ ಕೆಲಸವನ್ನು ಮಹಾರಾಷ್ಟ್ರದ ಜಲಗಾಂವ್‌ನ ಜೈನ್‌ ಕಂಪನಿ ಅವರು ಮಾಡುತ್ತಿದ್ದಾರೆ.
ಹಲವಾರು ಅಂಗ ಸಂಸ್ಥೆಗಳನ್ನು ಒಳಗೊಂಡಿರುವ ಜೈನ್‌ ಕಂಪನಿ, 1995ರಿಂದ ಆಹಾರದ ಮೌಲ್ಯವರ್ಧನೆ ಮಾಡುವ ಕೆಲಸ ಪ್ರಾರಂಭಿಸಿತು. ರಫ್ತಿಗಾಗಿ ಮೌಲ್ಯವರ್ಧನೆ ಮಾಡಬೇಕಿದ್ದರೆ ಅಂತಾರಾಷ್ಟ್ರೀಯ ಆಹಾರ ಸಂಸ್ಥೆ ಮತ್ತು ಐಎಸ್‌ಒ 20000 ಇದರ ಗುಣಮಟ್ಟವನ್ನು ಪಡೆದಿರಬೇಕಾಗುತ್ತದೆ. ಇದನ್ನು ಪಡೆಯುವಾಗ ಹರಸಾಹಸ ಪಡಬೇಕು. ಅದಕ್ಕಾಗಿ ಕಂಪನಿ ಅವರು ವ್ಯವಸ್ಥಿತ ಚಿತ್ರಣವನ್ನು ನೀಡಬೇಕು. ಅದನ್ನು ಅಂತಾರಾಷ್ಟ್ರೀಯ ಗುಣಮಟ್ಟ ನಿರ್ಧಾರ ಸಮಿತಿ ಅವರು ನಿಶಾನೆ ತೋರಿಸಿದ ನಂತರ ಆಹಾರೋತ್ಪಾನೆಯನ್ನು ರಫ್ತು ಮಾಡಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ರಫ್ತು ಮಾಡುವ ದೇಶಗಳ ಆಹಾರ ಗುಣಮಟ್ಟಕ್ಕೆ ಸರಿಯಾಗಿ ಮತ್ತು ಗ್ರಾಹಕರ ಮನಸ್ಥಿತಿ ಮತ್ತು ಬೇಡಿಗೆ ಅನುಗುಣವಾಗಿ ರಫ್ತು ಮಾಡಬೇಕಾಗುತ್ತದೆ. ಇದನ್ನು ಜೈನ್‌ ಕಂಪನಿ ಸಾಧಿಸಿದೆ.
ಮೌಲ್ಯವರ್ಧನೆಯ ರೂಪ ಮತ್ತು ಪದಾರ್ಥಗಳು: ಮೌಲ್ಯವರ್ಧನೆಗೆ ಬಹಳಷ್ಟು ಪದಾರ್ಥಗಳನ್ನು ಆಯ್ಕೆ ಮಾಡಿಕೊಳ್ಳದೆ ಸಿಮೀತ ಪದಾರ್ಥಗಳನ್ನು ಇವರು ಆಯ್ಕೆ ಮಾಡಿಕೊಂಡಿದ್ದಾರೆ. ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹೆಚ್ಚು ಪ್ರಮಾಣದಲ್ಲಿ ಮಾಡುತ್ತಿದ್ದಾರೆ.
ಇವರು ತಯಾರಿಸುವ ಪದಾರ್ಥದ ಮೌಲ್ಯವನ್ನು ಹೆಚ್ಚಿಸಲು ಅನುಸರಿಸಿದ ಕ್ರಮವೆಂದರೆ ನಿರ್ಜಲೀಕರಣ ಮಾಡುವುದು. ಬಹಳ ಕಾರದ ಅಂಶ ಹೆಚ್ಚಿರುವ ಬಿಳಿ ಈರುಳ್ಳಿಯನ್ನು ಬಳಸುತ್ತಾರೆ. ನಮ್ಮಲ್ಲಿ ಬೆಳೆಯುವ ಕೆಂಪು ಈರುಳ್ಳಿ ನಿರ್ಜಲೀಕರಣಕ್ಕೆ ಸೂಕ್ತವಾಗುವುದಿಲ್ಲ. ಇದರಂತೆ ಬೆಳ್ಳುಳ್ಳಿ, ಕೆಂಪು ಮೆಣಸು, ದೊಣ್ಣೆ ಮೆಣಸು, ಟೊಮೆಟೋ ಮುಂತಾದ ತರಕಾರಿಗಳ ನಿರ್ಜಲೀಕರಿಸುತ್ತಾರೆ. ಇದು ಪೌಡರ್‌ ರೂಪದಲ್ಲಿರುತ್ತದೆ.
ತರಕಾರಿಯ ಜೊತೆಗೆ ಹಣ್ಣುಗಳನ್ನು ಶೀತಲೀಕರಣಗೊಳಿಸಿ ವಿದೇಶದಲ್ಲಿ ಮಾರುಕಟ್ಟೆಯನ್ನು ಕಂಡು ಕೊಂಡಿದ್ದಾರೆ. ಮಾವು, ಪೇರಲೆ, ದಾಳಿಂಬೆ, ಬಾಳೆಹಣ್ಣು, ನೆಲ್ಲಿಕಾಯಿಗಳನ್ನು ನಿರ್ಜೀವಗೊಳಿಸುತ್ತಾರೆ. ಹೀಗೆ ಮಾಡಿದರು ಇದರಲ್ಲಿರುವ ಜೀವಕೋಶಗಳು ಸಾಯುವುದಿಲ್ಲ. ಒಂದು ವರ್ಷದ ನಂತರ ಇದನ್ನು ಸಾಮಾನ್ಯ ವಾತಾವರಣದಲ್ಲಿಟ್ಟರೆ ತಾಜಾ ಹಣ್ಣಿನಂತೆಯೇ ಗ್ರಾಹಕರಿಗೆ ದೊರೆಯುತ್ತದೆ.
ನಿರ್ಜಲೀಕರಿಸಿದ ತರಕಾರಿಗಳು ಎಲ್ಲಾ ರೀತಿಯ ಆಹಾರಗಳಿಗೆ ಉಪಯೋಗಿಸುವಂತೆ ಇರುತ್ತದೆ. ಸಾಂಬಾರ, ಫೀಜಾ ಮುಂತಾದ ಆಹಾರಗಳಿಗೆ ನೇರವಾಗಿ ಬಳಸಬಹುದು. ಇದೊಂದು ಉಪಯೋಗಿಸುವವರಿಗೆ ಮಿತ್ರನಂತೆ ಇರುತ್ತದೆ. ಉಪಯುಕ್ತವಾಗಿಯೂ, ದೀರ್ಘ ಬಾಳಿಕೆಯೂ ಬರುತ್ತದೆ.
ಶೀತಿಲಗೊಳಿಸಿದ ಹಣ್ಣುಗಳನ್ನು ಪಾನೀಯಗಳನ್ನು ತಯಾರಿಸಲು, ಐಸ್‌ಕ್ರಿಮ್‌ಗೆ, ಹಣ್ಣುಗಳ ಮಿಶ್ರಣ (ಸಲಾಡ್‌)ಕ್ಕೆ ಬಳಸಲು ಯೋಗ್ಯವಾಗಿರುತ್ತದೆ. ಇದು ಯಾವುದೇ ರೀತಿಯ ರಾಸಾಯನಿಕಗಳನ್ನು ಒಳಗೊಂಡಿರದೇ ಬಹುದಿನ ಹಾಳಗಾದೇ ಇರುತ್ತದೆ.
ಮೌಲ್ಯವರ್ಧನೆ ಶ್ರಮ: ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡುವುದು ಸುಲಭದ ಕೆಲಸವಲ್ಲ. ಅದಕ್ಕೆ ಬಳಸುವ ತರಕಾರಿ, ಹಣ್ಣುಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕಾಗುತ್ತದೆ. ಇದನ್ನು ಸಾಮಾನ್ಯ ರೈತರಿಂದ ಪಡೆಯಲು ಸ್ವಲ್ಪ ಕಷ್ಟವೇ ಸರಿ. ಅದಕ್ಕಾಗಿ ಜೈನ್‌ ಕಂಪನಿ ರೈತರೊಂದಿಗೆ ಕರಾರು ಕೃಷಿಯನ್ನು ಮಾಡುತ್ತಿದೆ. ಬಹಳಷ್ಟು ಕೃಷಿಕರಿಗೆ ಕರಾರು ಕೃಷಿ ಆಸಕ್ತಿದಾಯಕವು ಅಲ್ಲ ಮತ್ತು ನಂಬಿಕೆಗೆ ಅರ್ಹವಲ್ಲ ಎಂಬ ಭಾವನೆಯು ಇದೆ. ಆದರೆ ಇವರು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಮಾಡುತ್ತಿದ್ದಾರೆ. ಇವರು ಹೆಚ್ಚಾಗಿ ಬಿಳಿ ಈರುಳ್ಳಿಯ ಕರಾರು ಕೃಷಿಗೆ ಒಳಪಡಿಸಿದ್ದಾರೆ. ಇದಕ್ಕೆ ಕಾರಣವು ಇದೆ. ಭಾರತೀಯ ತಳಿಗಳು ಈರುಳ್ಳಿಯನ್ನು ನಿರ್ಜಲೀಕರಣಗೊಳಿಸುವುದು ಕಷ್ಟ. ಅದಕ್ಕಾಗಿ ಅಮೇರಿಕಾದ ತಳಿಯನ್ನು ಬಳಸಬೇಕಾಗುತ್ತದೆ.
ಇವರ ಕರಾರು ಕೃಷಿಯಲ್ಲಿ ಬೀಜ, ಪೋಷಕಾಂಶ ಹಾಗೂ ನೀರಾವರಿ ವ್ಯವಸ್ಥೆಯನ್ನು ಇವರೇ ಮಾಡುತ್ತಾರೆ. ರೈತರ ಹೊಲದಲ್ಲಿ ಬೆಳೆಸಿದ ಈರುಳ್ಳಿಯನ್ನು ಕೊಯ್ಲು ಮಾಡುವಾಗ ಇರುವ ಮಾರುಕಟ್ಟೆಯ ಮೌಲ್ಯದಲ್ಲಿ ಖರೀದಿಸುತ್ತಾರೆ. ಒನ್ನೊಮ್ಮೆ ಮಾರುಕಟ್ಟೆ ಮೌಲ್ಯ 3 ರೂಪಾಯಿಗಿಂತ ಕಡಿಮೆ ಇದ್ದರೆ ಇವರು ರೈತರಿಗೆ ಕನಿಷ್ಠ 3 ರೂಪಾಯಿಯನ್ನು ನೀಡುತ್ತಾರೆ.
`ನಮ್ಮ ಕಂಪನಿ ಇರುವವರೆಗೆ ಕರಾರು ಕೃಷಿಯಲ್ಲಿ ಯಾವುದೇ ರೀತಿಯ ಗೊಂದಲಗಳು ಆಗುವುದಿಲ್ಲ.ರೈತರನ್ನು ಸೋಲಿಸುವ ಕೆಲಸಕ್ಕೂ ಕೈ ಹಾಕುವುದಿಲ್ಲ.ಅವರಿಗೆ ಅನುಕೂಲವಾಗುವ ರೀತಿಯಲ್ಲಿ ನಾವುಕರಾರನ್ನು ಮಾಡಿಕೊಳ್ಳುತ್ತಿದ್ದೇವೆ. ನಾವು ಈ ರೀತಿಯಲ್ಲಿ ಈರುಳ್ಳಿಯನ್ನು ಖರೀದಿಸಿದರೂ ನಮ್ಮ ಬೇಡಿಕೆಗೆ ಸಾಕಾಗುತ್ತಿಲ್ಲ. ಹೊರಗಡೆಯಿಂದಲೂ ಖರೀದಿ ಮಾಡತ್ತಿದ್ದೇವೆ' ಎನ್ನುವ ಮಾತನ್ನು ಕಂಪನಿ ಮುಖ್ಯಸ್ಥ ಅಜಿತ್‌ ಜೈನ್‌ ಹೇಳುತ್ತಾರೆ.
ಹಣ್ಣಿನ ಮೌಲ್ಯವರ್ಧನೆಗೆ ಬೇಕಾಗುವ ಮಾವನ್ನು ಕೋಲಾರ ಮತ್ತು ಧಾರವಾಡದಿಂದ ಹೆಚ್ಚು ಖರೀಸುತ್ತಿದ್ದಾರೆ. ಇಂತಹ ಮೌಲ್ಯವರ್ಧನೆ ಮಾಡುವ ಘಟಕಗಳೂ ಕರ್ನಾಟಕಕ್ಕೆ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಗಮನ ಹರಿಸಿದರೆ ಬಹಳಷ್ಟು ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನೀಡುವ ಪ್ರಮೇಯ ಬರುವುದಿಲ್ಲ.
ಮಾಹಿತಿಗಾಗಿ ಸಂಪರ್ಕಿಸಿ: ಚಿದಂಬರ ಜೋಶಿ ಸಿಟಿಎಸ್‌ ನಂ. 7737, 24/13, ಸೆಕ್ಟರ್‌ 12, ಕುಸ್ರೋ ನಗರ, ಮಾಳಮಾರುತಿ ಎಕ್ಸ್‌ಟೆನ್ಷನ್‌, ಬೆಳಗಾವಿ-16, ದೂರವಾಣಿ: 9448286508.
ನಾಗರಾಜ ಮತ್ತಿಗಾರ

Monday, February 23, 2009

ರಂಗಿಲ್ಲದ ರೇಷಿಮೆ


ಆರ್ಥಿಕ ಬಿಕ್ಕ­ಟ್ಟಿನ ಪರಿ­ಣಾಮ ರೇಷ್ಮೆ ಕೃಷಿ-ಕೈಗಾ­ರಿ­ಕೆ­ಗಳ ಮೇಲೆ ಪರಿ­ಣಾಮ ಬೀರಿದ್ದು, ರೇಷ್ಮೆ ಉದ್ಯಮ ತತ್ತ­ರಿ­ಸು­ತ್ತಿದೆ.
ಆಹಾರ ಪದಾ­ರ್ಥ­ವ­ಲ್ಲ­ದಿ­ದ್ದರೂ ಕೃಷಿ­ಕ­ರಿಗೆ ಸಾಕಷ್ಟು ಆದಾಯ ತಂದು ಕೊಡುವ ಕ್ಷೇತ್ರ ರೇಷ್ಮೆ. ಉಳಿ­ದೆಲ್ಲಾ ವಸ್ತು­ಗಳ ಬೆಲೆ ಕುಸಿ­ದರೂ ಆಲಂ­ಕಾ­ರಿಕ ಉತ್ಪ­ನ್ನ­ಗಳ ತಯಾ­ರಿ­ಕೆಯ ಕಚ್ಚಾ­ವ­ಸ್ತು­ವಾದ ರೇಷ್ಮೆ ಬೆಲೆ ಅಷ್ಟಾಗಿ ಇಳಿ­ಕೆ­ಯಾ­ಗು­ತ್ತಿ­ರ­ಲಿಲ್ಲ. ಅಗ­ತ್ಯ­ದಷ್ಟು ರೇಷ್ಮೆ ಉತ್ಪಾ­ದ­ನೆ­ಯಾ­ಗದೇ ಇರು­ವುದು ಇದಕ್ಕೆ ಕಾರ­ಣ­ವಾದ ಪ್ರಮುಖ ಅಂಶ­ವಾ­ಗಿತ್ತು. ದೇಶೀಯ ಬಳಕೆ ಜತೆ­ಯ­ಲ್ಲಿಯೇ ಭಾರ­ತೀಯ ಮೂಲದ ಅಪ್ಪಟ ರೇಷ್ಮೆಗೆ ವಿದೇಶಿ ನೆಲೆ­ಯಲ್ಲಿ ಬೇಡಿಕೆ ಸಾಕ­ಷ್ಟಿತ್ತು. ಭಾರ­ತದ ರೇಷ್ಮೆಗೆ ಚೈನಾ ಪ್ರಬಲ ಪೈಪೋಟಿ ನೀಡು­ತ್ತಿ­ದ್ದರೂ ಶುದ್ಧ­ತೆ­ಯಲ್ಲಿ ಸ್ಪರ್ಧಿ­ಸ­ಲಾ­ಗದೇ ವಿದೇಶಿ ರಾಷ್ಟ್ರ­ಗ­ಳಲ್ಲಿ ಭಾರ­ತದ ರೇಷ್ಮೆ ತನ್ನ ಅಸ್ತಿತ್ವ ಉಳಿ­ಸಿ­ಕೊಂ­ಡಿತ್ತು.
ಸ್ಥಳೀಯ ಬೇಡಿಕೆ ಪೂರೈ­ಸ­ಲಾ­ಗದೇ ಇದ್ದರೂ, ವಿದೇ­ಶಕ್ಕೆ ರಫ್ತು ಮಾಡುವ ಕಾರ­ಣ­ದಿಂ­ದಲೇ ರೇಷ್ಮೆ ಉದ್ಯಮ ಈ ಪರಿ ಬೆಳೆ­ದಿತ್ತು. ಭಾರ­ತದ ಉತ್ಪ­ನ್ನ­ಗಳ ಪ್ರಮುಖ ಮಾರು­ಕ­ಟ್ಟೆ­ಯಾ­ಗಿದ್ದ ಅಮೆ­ರಿಕ, ಬ್ರಿಟನ್‌, ಅರಬ್‌ ರಾಷ್ಟ್ರ­ಗಳು, ಇಟಲಿ ಹಾಗೂ ಜರ್ಮ­ನಿ­ಯಿಂದ ರೇಷ್ಮೆ ಬೇಡಿ­ಕೆಗೆ ಕಡಿ­ವಾಣ ಬಿದ್ದಿದೆ. ವಿಶ್ವ ಆರ್ಥಿಕ ಹಿಂಜ­ರಿ­ತದ ಪರಿ­ಣಾಮ ದುಭಾರಿ ವಸ್ತು­ಗಳ ಮಾರು­ಕಟ್ಟೆ ಮೇಲೆ ಅಡ್ಡ ಪರಿ­ಣಾಮ ಬೀರಿದ್ದೇ ಈ ಯಡ­ವ­ಟ್ಟಿಗೆ ಕಾರಣ. ಈ ಆರ್ಥಿಕ ವರ್ಷಾಂ­ತ್ಯ­ದೊ­ಳಗೆ ಶೇ.50 ರಷ್ಟು ಬೇಡಿಕೆ ಕಡಿ­ಮೆ­ಯಾ­ಗ­ಬ­ಹು­ದೆಂದು ಕೇಂದ್ರೀಯ ರೇಷ್ಮೆ ಮಂಡಳಿ ಅಂದಾ­ಜಿ­ಸಿದೆ. ಇದು ಇಡೀ ಭಾರ­ತದ ರೇಷ್ಮೆ ಬೆಳೆ, ಉತ್ಪಾ­ದನೆ ಹಾಗೂ ಉದ್ಯ­ಮದ ಮೇಲೆ ತೀಕ್ಷ್ಣ ಪರಿ­ಣಾಮ ಬೀರ­ಲಿದೆ.
ಗರಿ ಗರಿ ರೇಷ್ಮೆ:
ಇಡೀ ವಿಶ್ವ­ದಲ್ಲಿ ರೇಷ್ಮೆ ಉತ್ಪಾ­ದಿ­ಸುವ ಪ್ರಮುಖ ರಾಷ್ಟ್ರ­ಗ­ಳೆಂ­ದರೆ ಚೀನಾ ಮತ್ತು ಭಾರತ. ವಿಶ್ವ­ದಲ್ಲಿ ವಾರ್ಷಿಕ 1,53,000 ಮೆಟ್ರಿಕ್‌ ಟನ್‌ ರೇಷ್ಮೆ ಉತ್ಪಾ­ದ­ನೆ­ಯಾ­ಗು­ತ್ತದೆ. ಇದ­ರಲ್ಲಿ ಪ್ರಮುಖ ಪಾಲು ಚೀನಾ­ದ್ದಾ­ಗಿದ್ದು, 1,30,000 ಟನ್‌­ಗ­ಳ­ಷ್ಟಿದೆ. ಭಾರ­ತವು 18,320 ಟನ್‌­ಗ­ಳಷ್ಟು ಮಾತ್ರ ಕಚ್ಚಾ ತಯಾ­ರಿ­ಸು­ತ್ತದೆ.
ರೇಷ್ಮೆ ಕೃಷಿ, ರೀಲಿಂಗ್‌, ವೀಲಿಂಗ್‌, ಗ್ರೇಡಿಂಗ್‌ ಹೀಗೆ ಒಟ್ಟು 61 ಲಕ್ಷ ಮಂದಿಗೆ ರೇಷ್ಮೆ ಉದ್ಯೋಗ ಒದ­ಗಿ­ಸಿದೆ. ಈ ಪೈಕಿ ಶೇ.60 ರಷ್ಟು ಮಂದಿ ಮಹಿ­ಳೆ­ಯ­ರಿ­ದ್ದಾರೆ.
ವಿಶ್ವ­ದಲ್ಲಿ ಎರ­ಡನೇ ರಾಷ್ಟ್ರ ಭಾರ­ತ­ವಾ­ಗಿ­ದ್ದರೆ, ಭಾರ­ತ­ದಲ್ಲಿ ಕರ್ನಾ­ಟಕ ಮೊದಲ ಸ್ಥಾನ­ದ­ಲ್ಲಿದೆ. ದೇಶ­ದಲ್ಲಿ ಒಟ್ಟು 18 ಸಾವಿರ ಟನ್‌­ಗ­ಳಷ್ಟು ರೇಷ್ಮೆ ಬೆಳೆ­ಯು­ತ್ತಿ­ದ್ದರೆ ಇದ­ರಲ್ಲಿ ಕರ್ನಾ­ಟ­ಕದ ಪಾಲು 14 ಸಾವಿರ ಟನ್‌. ಅಂದರೆ ಶೇ.70 ರಷ್ಟು ಕಚ್ಚಾ ರೇಷ್ಮೆ ಕರ್ನಾ­ಟ­ಕದ್ದೇ ಆಗಿದೆ. ಇದನ್ನು ಲೆಕ್ಕ ಹಾಕಿ­ದರೆ ರೇಷ್ಮೆ ರಫ್ತಿನ ಪ್ರಮುಖ ಪಾಲು ಕರ್ನಾ­ಟ­ಕ­ದಿಂ­ದಲೇ ಆಗು­ತ್ತದೆ.
ಕರ್ನಾ­ಟ­ಕದ ಕೋಲಾರ, ರಾಮ­ನ­ಗರ, ಚಿತ್ರ­ದುರ್ಗ, ಚಿಕ್ಕ­ಬ­ಳ್ಳಾ­ಪುರ, ಹಾಸನ, ಶಿವ­ಮೊಗ್ಗ, ದಾವ­ಣ­ಗೆರೆ, ಮೈಸೂರು ಮತ್ತಿ­ತರ ಜಿಲ್ಲೆ­ಗ­ಳಲ್ಲಿ ರೇಷ್ಮೆ ಕೃಷಿ­ಯಲ್ಲಿ ತೊಡ­ಗಿ­ಕೊಂಡ ಸಾಕಷ್ಟು ಮಂದಿ­ಯಿ­ದ್ದಾರೆ. ಉತ್ತ­ರದ ಜಿಲ್ಲೆ­ಗಳೂ ಇದ­ರಿಂದ ಹೊರ­ತಲ್ಲ.
ಕೆಲವು ರೈತ­ರಿಗೆ ರೇಷ್ಮೆ ಕೃಷಿ ಉಪ ಕಸುಬು ಆಗಿ­ದ್ದರೆ ಇನ್ನು ಕೆಲ­ವರು ಪ್ರಮು­ಖ­ವಾಗಿ ಇದನ್ನು ಅವ­ಲಂ­ಬಿ­ಸಿ­ದ್ದಾರೆ. ಮಾರು­ಕಟ್ಟೆ ಕೊರತೆ ಮಧ್ಯೆಯೂ ರೇಷ್ಮೆ ಕೃಷಿ­ಯನ್ನು ಜೀವಂ­ತ­ವಾಗಿ ಇಟ್ಟಿ­ರು­ವುದು ರೈತರ ಸಾಧ­ನೆಯೇ ಸರಿ. ಏಕೆಂ­ದರೆ ರೇಷ್ಮೆಯ ಪ್ರಮುಖ ಮಾರು­ಕಟ್ಟೆ ರಾಮ­ನ­ಗರ(ಈಗ ಜಿಲ್ಲಾ ಕೇಂದ್ರ­ವಾ­ಗಿ­ರುವ)ದಲ್ಲಿ ಮಾತ್ರ­ವಿದ್ದು, ರಾಜ್ಯದ ಯಾವುದೇ ಭಾಗದ ರೈತ ಇಲ್ಲಿಗೆ ತಂದು ಮಾರ­ಬೇಕು. ಇಲ್ಲಾ ಆಯಾ ಜಿಲ್ಲೆ­ಗಳ ದಲ್ಲಾ­ಳಿ­ಗ­ಳಿಗೆ ಮಾರ­ಬೇ­ಕಾದ ಅನಿ­ವಾ­ರ್ಯ­ತೆ­ಯಿದೆ.
ರೇಷ್ಮೆ ಕೃಷಿ ಉಳಿದ ಕೃಷಿ­ಗ­ಳಂ­ತಲ್ಲ. ಅದಕ್ಕೆ ತನ್ನದೇ ಆದ ನಾಜೂಕು ಬೇಕು. ರೇಷ್ಮೆ ಹುಳು­ಗ­ಳಿಗೆ ಬೇಕಾದ ಆಹಾರ( ಹಿಪ್ಪು ನೇರಳೆ ಸೊಪ್ಪು) ಬೆಳೆ­ಯ­ಬೇಕು, ಅದನ್ನು ತಂದು ಓರಣ ಮಾಡ­ಬೇಕು. ರೇಷ್ಮೆ ತಟ್ಟಿ­ಗ­ಳಲ್ಲಿ ಆ ಸೊಪ್ಪು­ಗ­ಳನ್ನು ನೀಟಾಗಿ ಕತ್ತ­ರಿಸಿ ಹಾಕಿ, ಹುಳು­ಗ­ಳನ್ನು ಅದಕ್ಕೆ ಬಿಡ­ಬೇಕು. ಸೊಪ್ಪಿ­ನಲ್ಲಿ ರೋಗಾ­ಣು­ಗ­ಳಿ­ದ್ದರೆ ಅಥವಾ ರೇಷ್ಮೆ ತಟ್ಟಿ­ಗ­ಳಲ್ಲಿ ಸೋಂಕಿ­ದ್ದರೆ ಅಷ್ಟೂ ಹುಳು­ಗಳು ಪ್ರಾಣ ಬಿಡು­ತ್ತವೆ. ಹುಳು­ಗ­ಳಿಗೆ ಕೊಟ್ಟ ದುಡ್ಡು ಕೂಡ ವಾಪಸ್ಸು ಬರದು. ಹಾಗೆಯೇ ಹುಳು ಬಲಿತು, ಗೂಡು ಕಟ್ಟಿ ರೇಷ್ಮೆ ನೂಲನ್ನು ತಯಾ­ರಿ­ಸು­ವ­ವ­ರೆಗೂ ಅದನ್ನು ಮಗು­ವಿ­ನಂತೆ ಆರೈಕೆ ಮಾಡ­ಬೇಕು. ನಿಜ­ವಾಗಿ ಹೇಳ­ಬೇ­ಕೆಂ­ದರೆ ಬಾಣಂ­ತಿ­ಯನ್ನು ಸಲ­ಹಿದ ರೀತಿಯ ಸೂಕ್ಷ್ಮತೆ ರೇಷ್ಮೆ ಕೃಷಿಗೆ ಅಗತ್ಯ.
ಇತ್ತೀ­ಚಿನ ವರ್ಷ­ಗ­ಳಲ್ಲಿ ಬೆಲೆ ಉತ್ತ­ಮ­ವಾ­ಗಿ­ದೆ­ಯಾ­ದರೂ ಕೂಲಿ­ಗಳ ಸಮ­ಸ್ಯೆ­ಯಿಂದ ರೈತರು ಬಸ­ವ­ಳಿ­ದಿ­ದ್ದಾರೆ. ಮೇಲೆ ಉಲ್ಲೇ­ಖಿ­ಸಿ­ದಂ­ತಹ ಅಷ್ಟೂ ಕೆಲ­ಸ­ವನ್ನು ಕೇವಲ ಮನೆ­ಯಂದಿ ಮಾಡ­ಲಾ­ಗು­ವು­ದಿಲ್ಲ. ಅದಕ್ಕೆ ಸೂಕ್ಷ್ಮ­ತೆ­ಯುಳ್ಳ ಕೃಷಿ ಕೆಲ­ಸ­ಗಾ­ರರೇ ಬೇಕು. ನಗ­ರೀ­ಕ­ರ­ಣ­ದಿಂ­ದಾಗಿ ರೇಷ್ಮೆ ಕೃಷಿ­ಕರು ಕೂಲಿ­ಕಾ­ರ್ಮಿ­ಕರ ಸಮ­ಸ್ಯೆ­ಯನ್ನು ಎದು­ರಿ­ಸು­ತ್ತಿ­ದ್ದಾರೆ.
ಇದರ ಜತೆಗೆ ಮಲ­ಬಾರಿ ತಳಿಗೆ ತಗು­ಲಿ­ರುವ ರೋಗ­ದಿಂ­ದಾಗಿ ಸುಮಾರು 47 ಸಾವಿರ ಹೆಕ್ಟೇ­ರ್‌­ನ­ಲ್ಲಿದ್ದ ಮಲ­ಬಾರಿ ತಳಿ­ಯನ್ನು ರೈತರು ಕಿತ್ತು­ಹಾ­ಕಿ­ದ್ದಾರೆ. ಇದು ಕೂಡ ರೈತ­ರನ್ನು ಕಾಡು­ತ್ತಿ­ರುವ ಸಮ­ಸ್ಯೆ­ಯಾ­ಗಿದೆ.
ಇದರ ಜತೆಗೆ ರೇಷ್ಮೆ ನೂಲು ತೆಗೆ­ಯು­ವ­ವರು, ರೇಷ್ಮೆ ಮಗ್ಗ­ಗ­ಳಲ್ಲಿ ರೈತ­ರಷ್ಟೇ ಪ್ರಮಾ­ಣ­ದಲ್ಲಿ ಕೆಲಸ ಮಾಡು­ವ­ವ­ರಿ­ದ್ದಾರೆ. ಗ್ರೇಡಿಂಗ್‌, ಬಣ್ಣ ಹಾಕು­ವ­ವರು ಕೂಡ ಸಮ­ಪ್ರ­ಮಾ­ಣ­ದ­ಲ್ಲಿ­ದ್ದಾರೆ. ಮಾರು­ಕಟ್ಟೆ ಮಾಡು­ವ­ವ­ರನ್ನು ಹೊರತು ಪಡಿ­ಸಿಯೂ ನೇರ­ವಾಗಿ ರೇಷ್ಮೆ ಕೃಷಿ-ಉದ್ಯ­ಮ­ದಲ್ಲಿ ಸಾಕಷ್ಟು ಮಂದಿ ತೊಡ­ಗಿ­ದ್ದಾರೆ. ವಿದೇ­ಶದ ರಫ್ತು ಶೇ.50 ರಷ್ಟು ಕುಸಿತ ಕಂಡ ಪರಿ­ಣಾಮ ಇವ­ರೆಲ್ಲಾ ತತ್ತ­ರಿ­ಸ­ಲಿ­ದ್ದಾರೆ. ದೇಶ­ದಲ್ಲಿ ಒಟ್ಟು 61 ಲಕ್ಷ ಮಂದಿ ರೇಷ್ಮೆ­ಯನ್ನು ನೆಚ್ಚಿ­ಕೊಂ­ಡಿದ್ದು, ಮಾರ್ಚ್‌ ಅಂತ್ಯ­ದೊ­ಳಗೆ 6 ಲಕ್ಷ ಮಂದಿ ಕೆಲಸ ಕಳೆ­ದು­ಕೊ­ಳ್ಳ­ಲಿ­ದ್ದಾ­ರೆಂದು ಅಂದಾ­ಜಿ­ಸ­ಲಾ­ಗಿದೆ.
ಚೀನಾ ರೇಷ್ಮೆ:
ಭಾರ­ತ­ದಲ್ಲಿ ಕಚ್ಚಾ ರೇಷ್ಮೆ, ರೇಷ್ಮೆ ಉತ್ಪನ್ನ ಸ್ಥಳೀಯ ಬೇಡಿ­ಕೆ­ಯನ್ನು ಪೂರೈ­ಸುವ ಮಟ್ಟ­ದ­ಲ್ಲಿಲ್ಲ. ಈ ಮಾರು­ಕಟ್ಟೆ ಕೊರತೆ ಹಾಗೂ ಭಾರ­ತದ ರೇಷ್ಮೆಗೆ ವಿದೇಶಿ ಮಾರು­ಕ­ಟ್ಟೆ­ಯಲ್ಲಿ ಬೇಡಿಕೆ ಇರು­ವು­ದನ್ನು ಗಮ­ನಿ­ಸಿದ ಮಾರಾ­ಟ­ಗಾ­ರರು ಕಡಿಮೆ ದರ­ದಲ್ಲಿ ಸಿಗುವ ಚೀನಾ ರೇಷ್ಮೆಯ ಮೊರೆ ಹೋಗಿ­ದ್ದಾರೆ.
ಕಳ್ಳ ಮಾರ್ಗ­ದಿಂದ ಭಾರ­ತದ ಮಾರು­ಕ­ಟ್ಟೆಗೆ ಸಾಕಷ್ಟು ಚೀನಾ ರೇಷ್ಮೆ ಹರಿದು ಬರು­ತ್ತಿದ್ದು ಮಾರು­ಕಟ್ಟೆ ಹಾಗೂ ರೇಷ್ಮೆ ಕೃಷಿಯ ಮೇಲೆ ಹೊಡೆತ ನೀಡಿದೆ.
ರೇಷ್ಮೆ ಕೃಷಿ­ಕರ ಒತ್ತ­ಡ­ದಿಂ­ದಾಗಿ ವಿದೇ­ಶ­ದಿಂದ ಆಮ­ದಾ­ಗುವ ರೇಷ್ಮೆ ಮೇಲೆ ಆಮದು ನಿರ್ಬಂಧ ಶುಲ್ಕ­ವನ್ನು ಕೇಂದ್ರ ಸರ್ಕಾರ ವಿಧಿ­ಸಿದೆ. ಇದು 2009 ಮಾರ್ಚ್‌ಗೆ ಅಂತ್ಯ­ಗೊ­ಳ್ಳ­ಲಿದೆ. ಆರ್ಥಿಕ ಹಿಂಜ­ರಿ­ತದ ಕಾರ­ಣ­ದಿಂದ ದೇಶೀಯ ರೇಷ್ಮೆ ಕಾಪಾ­ಡಲು ಕೇಂದ್ರ ಸರ್ಕಾರ 2013 ರವ­ರೆಗೆ ಆ್ಯಂಟಿ ಡಂಪಿಂಗ್‌ ಶುಲ್ಕ­ವನ್ನು ವಿಸ್ತ­ರಿ­ಸಿದೆ.
ಹಾಗಿದ್ದೂ ರೇಷ್ಮೆ ಪರಿ­ಸ್ಥಿತಿ ಸುಧಾ­ರಿ­ಸಿಲ್ಲ. ವಿದೇ­ಶ­ದಿಂದ ಬೇಡಿಕೆ ಕಡಿ­ಮೆ­ಯಾ­ಗಿ­ರುವ ಹಿನ್ನೆ­ಲೆ­ಯಲ್ಲಿ ರೇಷ್ಮೆ ರಫ್ತು ಮೇಲೆ ಹೊಡೆತ ಬಿದ್ದಿದೆ. ಈ ಹಿನ್ನೆ­ಲೆ­ಯಲ್ಲಿ ಭತ್ತ, ರಾಗಿ, ಸೆಣಬು ಮತ್ತಿ­ತರ ಬೆಳೆ­ಗ­ಳಿಗೆ ನೀಡು­ವಂತೆ ಬೆಂಬಲ ಬೆಲೆ ನೀಡು­ವಂತೆ ಆಗ್ರಹ ಕೇಳಿ­ಬಂ­ದಿದೆ. ಇದಕ್ಕೆ ಕೇಂದ್ರ ಸರ್ಕಾರ ಮನಸ್ಸು ಮಾಡ­ಬೇ­ಕಷ್ಟೆ. ಮೈಸೂರು ಸಿಲ್ಕ್‌ ಎಂದು ಹೆಸ­ರು­ವಾ­ಸಿ­ಯಾ­ಗಿ­ರುವ ಕರ್ನಾ­ಟ­ಕದ ರೇಷ್ಮೆ­ಯನ್ನು ಉಳಿ­ಸಲು, ರೇಷ್ಮೆ ಕೃಷಿ­ಕ­ರಲ್ಲಿ ಧೈರ್ಯ ತುಂಬಲು ರಾಜ್ಯ­ಸ­ರ್ಕಾರ ಕೂಡ ಮುಂದಾ­ಗ­ಬೇ­ಕಾದ ಅಗ­ತ್ಯ­ವಿದೆ.


-ವೈ.ಗ. ಜಗದೀಶ್‌

Sunday, February 15, 2009

ಶ್ರಮ ಬೇಡದ ಶಮೆ ಬಿದಿರು


ಕಳೆದ ವರ್ಷ ಮಲೆನಾಡಿನಲ್ಲಿ ಕಾಡುಬಿದಿರಿಗೆ ಹೂಬಿಟ್ಟ ಮರಣಸಂಭ್ರಮ. ಇಷ್ಟು ದಿನ ಬಿದಿರಿನೆಡೆಗೆ ಇದ್ದ ತಾತ್ಸಾರ ಮಾಯವಾಗಿ ತತ್ವಾರ ಉಂಟಾಗುವ ಸಂಭವನೀಯತೆ. ಅದು ಬಿಡಿ, ತಮ್ಮ ಕೃಷಿ ಜೀವನದಲ್ಲಿ ಬಿದಿರಿಗೂ ಮಹತ್ವದ ಸ್ಥಾನಮೊಂದನ್ನು ನೀಡಿ, ಅದಕ್ಕೆ ಮತ್ತು ತಮ್ಮ ಬಾಳಿಗೆ ಗುರುತರ ದಾರಿ ತೋರಿದ ಕುಟುಂಬಮೊಂದು ಸಾಗರ ತಾಲ್ಲೂಕು ಹೆಗ್ಗೋಡಿನ ಸಮೀಪದಲ್ಲಿದೆ.
ಶೆಮೆ ಎಂಬುದು ಬಿದಿರಿನ ಒಂದು ವರ್ಗಕ್ಕೆ ಸೇರಿದೆ. ಇದು ಅವುಗಳಲ್ಲಿ ಸೌಂದರ್ಯ ಸ್ಪರ್ಧೆ ಇಟ್ಟರೆ ಪ್ರಥಮ ಬಹುಮಾನ ಗಿಟ್ಟಿಸುವುದು ಖಚಿತ! ಉದ್ದುದ್ದಕ್ಕೆ ಆಕಾಶಕ್ಕೆ ಚಾಚಿದಂತೆ 18 -20 ಅಡಿ ಬೆಳೆಯುವ ಈ ಬೂದು ಹಸಿರಿನ ಬಿದಿರು ಅಡಿಕೆ ತಟ್ಟಿ ಮಾಡಿಸಲು ಹೇಳಿ ಮಾಡಿಸಿದ್ದು. ಇವತ್ತು ಹೊಸನಗರದ ಜಡ್ಡಿನಕೊಪ್ಪದ ಉಮೇಶ್‌ - ಸುರೇಶ್‌ ತಮ್ಮ ಮನೆಯ ತಟ್ಟಿ, ಬುಟ್ಟಿಯ ಅಗತ್ಯವನ್ನು ನಯಾ ಪೈಸೆ ಖರ್ಚಿಲ್ಲದೆ ಪೂರೈಸಿಕೊಳ್ಳುವ ಜೊತೆಗೆ ಒಂದಿಷ್ಟು ಪುಡಿಗಾಸನ್ನೂ ಸಂಪಾದಿಸಲು ಕಾರಣವಾಗಿರುವುದು ಶೆಮೆ ಬಿದಿರು!
ಏನಿದು ಶೆಮೆ ಬಿದಿರು?
ಶೆಮೆಯಲ್ಲಿ ಗಣ್ಣುಗಳು ದೂರ ದೂರ. ಒಂದು ಒಂದೂವರೆ ಇಂಚು ದಪ್ಪ. ಇದರಿಂದ ಎತ್ತುವ ಸಲಾಕು, ಅಂದರೆ ತಟ್ಟಿ ಬುಟ್ಟಿ ಮಾಡಲು ಬಳಸುವ ಬಿದಿರ ಎಳೆಗಳು ಉಳಿದ ಬಿದಿರುಗಳಿಗಿಂತ ಗಟ್ಟಿ. ಬಾಳ್ವಿಕೆ ಹೆಚ್ಚು. ಹಾಗಾಗಿ ಶೆಮೆ ತಟ್ಟಿಗೆ ಆ ಪರಿ ಬೆಲೆ.
ಅದರಲ್ಲೂ ಜೂನ್‌ನಿಂದ ಸೆಪ್ಟೆಂಬರ್‌ ವೇಳೆ ಹೆಚ್ಚಿನ ರಕ್ಷಣೆ ಬೇಕು. ಇವು ಬೆಳವಣಿಗೆಯ ತಿಂಗಳುಗಳು. ಇದಕ್ಕೆ ಯಾವುದೇ ರೋಗವೂ ಇಲ್ಲ. ಸಾಮಾನ್ಯವಾಗಿ ಕೃಷಿಕರಲ್ಲಿ ಲಭ್ಯವಿರುವ ದರಕು, ಸೋಗೆಯಂತಹ ಸಾವಯವ ಪದಾರ್ಥಗಳನ್ನು ಬುಡಕ್ಕೆ ಹಾಕಿದರೆ ಆಯಿತು, ಅದೇ ಗೊಬ್ಬರ. ನಾಲ್ಕನೇ ವರ್ಷದಿಂದಲೇ ಬಿದಿರು ಗಳಗಳು ಕೊಯ್ಲಿಗೆ ಸಿಗುತ್ತವೆ.
ಈ ಬಿದಿರು ಬೆಟ್ಟ, ಕಾಡಲ್ಲಿ ಬೆಳೆಯಲು ಮಾತ್ರ ಯೋಗ್ಯ. ಏತಕ್ಕಪ್ಪಾಂದ್ರೆ, ಇದಕ್ಕೆ ಒಂದು ಮರದ ಆಶ್ರಯ ಬೇಕೇ ಬೇಕು. ಮರದ ಪಕ್ಕದಲ್ಲಿಯೇ ನಾಟಿ ಮಾಡಬೇಕು. ಬಿದಿರು ಬೆಳೆದಂತೆ ಮರದ ಬೆನ್ನಿಗೆ ಆತು ನೇರವಾಗಿ ಮೇಲೆ ಚಿಮ್ಮುತ್ತದೆ. ಮರದ ಆಶ್ರಯವಿಲ್ಲದಿದ್ದರೆ ಬಿದಿರ ಮೆಳೆ ನೆಲದೆಡೆಗೆ ಬಾಗುತ್ತದೆ. ಈ ಮಾದರಿಯ ಗಳಗಳಿಗೆ ಗುಣಮಟ್ಟ ಇರುವುದಿಲ್ಲ. ತಟ್ಟಿ ಬುಟ್ಟಿ ಮಾಡುವವರು ಅತ್ಯಧಿಕ `ವೇಸ್ಟ್‌' ಬರುವ ಹಿನ್ನೆಲೆಯಲ್ಲಿ ಖಾಯಸ್‌ ಪಡುವುದಿಲ್ಲ. ನೇರವಾಗಿರುವ ಬಿದಿರಿಗೆ ಪರಮಾವಧಿ ಬೆಲೆ.
ಜಡ್ಡಿನಕೊಪ್ಪ ಸಹೋದರರ ಲೆಕ್ಕಾಚಾರ ಸರಳ. ಅವರಲ್ಲಿ ಸರಿಸುಮಾರು 50 ಬಿದಿರು ಬುಡಗಳಿವೆ. ಮನೆ ಸುತ್ತಲಿನ ಬೆಟ್ಟದಲ್ಲೆಲ್ಲ ಇದೇ. ಎಳ್ಳಾರೆ ರಾಮಯ್ಯ ಎಂಬುವವರಿಂದ ಅಪ್ಪ ತಂದು ಹಚ್ಚಿದ್ದು ಎಂದು ಇತಿಹಾಸ ನೆನೆಯುತ್ತಾರೆ ಸುರೇಶ್‌. ಇಂದು ಎಲ್ಲವೂ ಪುಷ್ಕಳವಾಗಿ ಬೆಳೆದಿವೆ. ಇವರು ಮರು ನಾಟಿ ಮಾಡಿದ್ದೂ ಇವೆ. ನಾಲ್ಕು ಐದು ವರ್ಷ ಪ್ರಾಯದ ಗಳಗಳನ್ನಷ್ಟೇ ಇವರು ಕಟಾವ್‌ಗೆ ಕೊಡುತ್ತಾರೆ. ಒಂದು ಮೆಳೆಯಿಂದ ಕನಿಷ್ಟ 12 ಗಳ ಗ್ಯಾರಂಟಿ. 20 -25 ಗಳ ಸಿಗುವುದೂ ಇದೆ.
ಇವರೇ ಸ್ವತಃ ಕೆಂಪು ಅಡಿಕೆ ಒಣಗಿಸಲು ಬೇಕಾದ ತಟ್ಟಿ ಮಾಡಿಸಿ ಮಾರುತ್ತಾರೆ. ಐದಾರು ವರ್ಷ ಬಾಳುವ ತಟ್ಟಿ ಎಂಬ ಖ್ಯಾತಿ ಸಿಕ್ಕಿರುವುದರಿಂದ ಸಾಗರದವರಲ್ಲದೆ ಸೊರಬ, ಹೊಸನಗರಗಳ ಅಡಿಕೆ ಬೆಳೆಗಾರರೂ ಮನೆಗೆ ಬಂದು ತಟ್ಟಿ ಖರೀದಿಸುತ್ತಾರೆ. ಇಷ್ಟಕ್ಕೂ ಇವರ ವಾಸ ಹೆಗ್ಗೋಡು ಸಮೀಪ. 16 ಕಿ.ಮೀ. ದೂರದ ಸಾಗರದ ಸಂಪರ್ಕ ಹೆಚ್ಚಿದ್ದರೂ ತಾಲ್ಲೂಕು ಮಾತ್ರ ಹೊಸನಗರ! ಇವರದ್ದು ವಾರ್ಷಿಕ 15 ಸಾವಿರ ರೂಪಾಯಿಗಳ ವ್ಯವಹಾರ. ಕೈಗೆ ಹೆಚ್ಚೆಂದರೆ ಐದು ಸಾವಿರ ಉಳಿದೀತು. ಆದರೆ ಮನೆಯ ಅಡಿಕೆ ಕೊಯ್ಲಿಗೆ ಅಥವಾ ಇನ್ನಾವುದೇ ಮಣ್ಣು ಕೆಲಸಕ್ಕೆ ತಟ್ಟಿ, ಚಬ್ಬೆ, ಹೆಡಿಗೆ, ಬುಟ್ಟಿ ಖರೀದಿಸಬೇಕಾದ ಖರ್ಚಿನ ಬಾಬತ್ತಿಲ್ಲ.
ಮಾರಾಟ ವ್ಯವಸ್ಥೆ ಏನು?
ಕೃಷಿಕನೇ ಸ್ವತಃ ತಟ್ಟಿ ಮಾಡಿಸಬೇಕೆಂದೇನೂ ಇಲ್ಲ. ಗಳದ ಗಾತ್ರ ನೋಡಿ 15ರಿಂದ 20 ರೂ. ದರಕ್ಕೆ ಕಡಿದು ಒಯ್ಯುವ ಕುಶಲಕರ್ಮಿಗಳಿದ್ದಾರೆ. ಮಲೆನಾಡಿನಲ್ಲಿ ಹಲವರ ಮನೆ ಹಿತ್ತಲಿನಲ್ಲಿ ಒಂದು ಎರಡು ಶೆಮೆ ಬುಡಗಳಿದ್ದು ಅವರೆಲ್ಲ ಗಳ ಮಾರುತ್ತಾರೆ. ಆದರೆ ಯಾರೊಬ್ಬರೂ ದೊಡ್ಡ ಪ್ರಮಾಣದಲ್ಲಿ ಶೆಮೆ ಕೃಷಿ ನಡೆಸಲು ಯೋಚಿಸಿದಂತಿಲ್ಲ. ವಾಸ್ತವವಾಗಿ ಖರ್ಚೇ ಇಲ್ಲದ ಶೆಮೆ ಕೃಷಿ ಅಡಿಕೆ ಬೆಳೆಗಾರರನ್ನು ಆಕರ್ಷಿಸಬೇಕಿತ್ತು. ಆದರೆ ಪ್ರತಿಕ್ರಿಯೆ ಶೂನ್ಯ ಎನ್ನುವ ಉಮೇಶ್‌ ಪ್ರಕಾರ, ಹತ್ತಿರದ ನಂದ್ರೆ ಗ್ರಾಮದ ಮಹಾಬಲಗಿರಿ ಎನ್‌.ಎಸ್‌. ಶೆಮೆ ಕೃಷಿ ಮಾಡಿರುವುದು ಒಂದು ಅಪವಾದ.
ಜಡ್ಡಿನಕೊಪ್ಪ ಸಹೋದರರ ವ್ಯಾಪಾರವೆಲ್ಲ ಮನೆ ಬಾಗಿಲಿನಲ್ಲೇ. ಬಹುಪಾಲು ಫೋನ್‌ ಮೂಲಕ ಬೇಡಿಕೆ ಸ್ವೀಕಾರ (08183 265150). ಸಾಮಾನ್ಯವಾಗಿ 7 -4 ರ ಅಳತೆಯ ತಟ್ಟಿ ತಯಾರಿ. ತಟ್ಟಿ ತಯಾರಿಸಿದ ನಂತರ ನಾಲ್ಕು ದಿನ ನೀರಲ್ಲಿ ಮುಳುಗಿಸುತ್ತಾರೆ. ಇದರಿಂದ ಬಿದಿರಿನ ಸಿಹಿಯೆಲ್ಲ ತೊಳೆದು ಹೋಗುವುದರಿಂದ ಬಾಳಿಕೆ ಹೆಚ್ಚುತ್ತದೆ. ಸ್ವಾರಸ್ಯವೆಂದರೆ, ಈ ಬಿದಿರಿನ ಕಟಾವ್‌ ಮಾಡಲು ಹುಣ್ಣಿಮೆ ಅಮವಾಸ್ಯೆಗಳ ನಿರ್ಬಂಧ ಇಲ್ಲವಂತೆ. ಆಸಕ್ತರಿಗೆ ಬಿದಿರ ಬುಡ ಒದಗಿಸಲೂ ಸುರೇಶ್‌ ತಯಾರಿದ್ದಾರೆ. ಒಂದು ಬುಡಕ್ಕೆ ನೂರು ರೂ.ಗಳ ದರ ನಿಗದಿಪಡಿಸಿದ್ದಾರೆ.
ಕೃಷಿಕರು ಶೆಮೆ ಬಿದಿರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಟ್ಟೆ ಒಣಗಿಸುವುದರಿಂದ ಹಿಡಿದು ಕಬ್ಬಿಣದ ಗೇಟಿಗೆ ಪರ್ಯಾಯವಾಗಿ ಈ ಬಿದಿರನ್ನು ಬಳಸಬಹುದು. ಇದನ್ನೇ ಆಕರ್ಷಕ ಬೇಲಿಯನ್ನಾಗಿಸಿದವರೂ ಇದ್ದಾರೆ. ತಟ್ಟಿಯಲ್ಲದೆ ಬುಟ್ಟಿ, ಹೂವಿನ ಸಿಬ್ಬಲು, ತಾತ್ಕಾಲಿಕ ಶೆಡ್‌ ಮಾಡಿಗೂ ಬಿದಿರು ಕಚ್ಚಾವಸ್ತು. ಕೃಷಿಕ ಕಬ್ಬಿಣದ ಸರಳು, ಮರದ ರೀಪಿನ ಬದಲಿಯಾಗಿ ಶೆಮೆ ಬಿದಿರನ್ನು ಉಪಯೋಗಿಸಬಹುದು. ಗಾಳಿ ಮಳೆಗೆ ನಲುಗದ ಶಮೆ 20 ವರ್ಷ ಕಳೆದರೂ ಗಟ್ಟಿ ಮುಟ್ಟಾಗಿರುವ ಉದಾಹರಣೆ ಇವೆ.
ಆದಾಯ, ಲಾಭ, ವಿದೇಶಿ ಮಾರುಕಟ್ಟೆಗಳ ವರ್ತುಲದಿಂದ ಕೃಷಿಕರು ಹೊರಬಂದು ಪರ್ಯಾಯ ಚಿಂತನೆ ನಡೆಸಲು ಈ ಬಡಿ ಬಿದಿರು ಸ್ಫೂರ್ತಿ ನೀಡುವಂತಾದರೆ ಅದೇ ಬಡಾ ವಿಚಾರ, ಅಲ್ಲವೇ?
-ಮಾವೆಂಸ

mavemsa@gmail.com

Thursday, February 5, 2009

ಅವಾಂತರಿ ಕುಲಾಂತರಿ “ತಂತ್ರಜ್ಞಾನ”


ಕಾಡಿ­ನಲ್ಲಿ ಇರುವ ಬದ­ನೆ­ಯನ್ನು ಹಾಗೇ ತಿಂದರೆ ಅದು ಪ್ರಕೃತಿ. ಕಾಡಿನ ಬದ­ನೆಗೆ ನಾಡ ಬದ­ನೆ­ಯನ್ನು ಸೇರಿಸಿ ಅದ­ಕ್ಕೊಂದು ಸಂಸ್ಕಾರ ನೀಡಿ ತಿಂದರೆ ಅದು ಸಂಸ್ಕೃತಿ. ಇವೆ­ರಡು ಬಿಟ್ಟು ಮತ್ತೊಂದು ಇದೆ, ಇರುವ ಬದ­ನೆಗೆ ಯಾವುದೋ ಜೀವಿಯ ಜೀನ್‌ ತಂದು ಸೇರಿಸಿ, ಅದನ್ನು ಮಾರ್ಪ­ಡಿಸಿ ಅದು ಮುಂದೆಂದು ತನ್ನ ಸಂತಾ­ನ­ವನ್ನು ಪಡೆ­ಯ­ದಿ­ರುವ ಹಾಗೇ ಮಾಡು­ವುದು ವಿಕೃತಿ. ಇದನ್ನು ಇಂದು ಬಹು­ರಾ­ಷ್ಟ್ರೀಯ ಬೀಜ ಕಂಪ­ನಿ­ಗಳು ಮಾಡು­ತ್ತಿವೆ.
ಭಾರತ ಸಾಮಾ­ಜಿ­ಕ­ವಾಗಿ, ಭೌಗೋ­ಳಿ­ಕ­ವಾಗಿ ಮಾತ್ರ ವೈವಿ­ಧ್ಯ­ವಾ­ಗಿ­ರದೆ, ಇಲ್ಲಿನ ಬೇಸಾ­ಯ­ಗ­ಳಲ್ಲೂ ವೈವಿ­ಧ್ಯ­ವಾ­ಗಿದೆ. ತರ­ಕಾ­ರಿ­ಯಲ್ಲೂ ಸಹ. ನಮ್ಮ­ಲ್ಲಿನ ಬಹು­ತೇಕ ಜನರು ಉಪ­ಯೋ­ಗಿ­ಸುವ ಬದನೆ ವೈವಿ­ಧ್ಯ­ತೆ­ಯಿಂದ ಕೂಡಿ­ರುವ ತರ­ಕಾ­ರಿ­ಗ­ಳ­ಲ್ಲೊಂದು. ವಿದೇಶಿ ಕಂಪನಿ ತಮ್ಮ ನೆಲ­ವನ್ನು ಬಿಟ್ಟು ನಮ್ಮ­ಲ್ಲಿಗೆ ಬಂದು `ಬಹು­ವ­ದನೆ'ಯಾದ ಬದ­ನೆಯ `ಕುಲ'ಗೆಡಿ­ಸುವ ಕಾರ್ಯ­ವನ್ನು ಮಾಡು­ತ್ತಿವೆ. ಅಂದರೆ `ಕುಲಾಂ­ತರಿ ತಳಿ­ಯನ್ನು ತಯಾರು ಮಾಡು­ತ್ತಿವೆ. ಆಸ್ಟ್ರಿಯಾ, ಇಟಲಿ ಮತ್ತು ಕೆಲವು ಯುರೋಪ್‌ ದೇಶ­ಗ­ಳಲ್ಲಿ `ಕುಲಾಂ­ತರಿ' ತಳಿ/ ಆಹಾ­ರ­ವನ್ನು ನಿಷೇಧ ಮಾಡಿ­ರು­ವಾ­ಗಲೇ ನಮ್ಮ­ಲ್ಲಿಗೆ ಅವರು ಬಂದಿ­ದ್ದಾರೆ.
ಕುಲಾಂ­ತರಿ ಅಥವಾ ಬಿಟಿ ಬದನೆ:
ಮಣ್ಣಿ­ನ­ಲ್ಲಿ­ರುವ ಬ್ಯಾಸಿ­ಲಸ್‌ ಥುರ­ನ್‌­ಜೆ­ನಿ­ಸಸ್‌ ಎನ್ನುವ ಬ್ಯಾಕ್ಟೀ­ರಿ­ಯಾಕ್ಕೆ ಬಿಟಿ ಎನ್ನು­ತ್ತಾರೆ. ಇದಕ್ಕೆ ಕಾಯಿ ಮತ್ತು ಕಾಂಡ ಕೊರಕ ಕೀಟ­ಗ­ಳಿಗೆ ಮಾರ­ಕ­ವಾ­ಗ­ಬಲ್ಲ ಪ್ರೋಟೀನು ಉತ್ಪಾ­ದಿ­ಸುವ ಸಾಮ­ರ್ಥ್ಯ­ವಿದೆ. ಕೀಟ­ಗ­ಳಿಗೆ ಮೃತ್ಯು­ಕಾ­ರ­ಕ­ವಾ­ಗ­ಬಲ್ಲ ಬ್ಯಾಕ್ಟಿ­ರೀ­ಯಾದ ವಂಶ­ವಾಯಿ(ಜೀನ್‌)ಯನ್ನು ನಮ್ಮ­ಲ್ಲಿಯ ಬದ­ನೆ­ಯೊ­ಳಗೆ ಸೇರಿ­ಸು­ತ್ತಾರೆ. ಇದು ಹೊಲಿ­ಗೆ­ಯವ ಪ್ಯಾಂಟನ್ನು ಕತ್ತ­ರಿಸಿ ಹೋಲಿ­ದಷ್ಟು ಸುಲ­ಭ­ವಲ್ಲ. ಅತ್ಯಾ­ಧು­ನಿಕ ಸಲ­ಕ­ರ­ಣೆ­ಗಳು ಬೇಕು. ಇದು ಕೋಟ್ಯಾಂ­ತರ ಡಾಲರ್‌ ಖರ್ಚಿನ ಬಾಪತ್ತು.
ಹೀಗೆ ತಯಾ­ರಿ­ಸಿದ ಬದನೆ, ಬಿಟಿ­ಯನ್ನು ತನ್ನ ಮೈಯೊ­ಳಗೆ ತುಂಬಿಸಿ ಕೊಳ್ಳು­ತ್ತದೆ. ಇದೊಂದು ರೀತಿ ಮೈಯೆಲ್ಲಾ ವಿಷ ಇರುವ `ಪೂತನಿ'ಯಾಗಿ­ರು­ತ್ತದೆ. ಹೀಗಿ­ರು­ವಾಗ ಬದ­ನೆಯ ಮೇಲೆ ದಾಳಿ ಮಾಡುವ ಕಾಂಡ­ಕೊ­ರಕ, ಕಾಯಿ­ಕೊ­ರಕ ಹುಳು­ಗಳ ಬಾಧೆ ಇದಕ್ಕೆ ಇರು­ವು­ದಿಲ್ಲ. ಕಾರ­ಣ­ವಿಷ್ಟೇ ಬಿಟಿ ಬದ­ನೆ­ಯನ್ನು ತಿಂದ ಹುಳು­ಗಳ ಜೀರ್ಣಾಂಗ ವ್ಯವಸ್ಥೆ ಹದ­ಗೆಟ್ಟು ಸಾಯು­ತ್ತವೆ. ಔಷಧಿ ಹೊಡೆ­ಯುವ ಸಮ­ಸ್ಯೆ­ಯಿ­ರು­ವು­ದಿಲ್ಲ. ಇಳು­ವರಿ ತಾನಾ­ಗಿಯೇ ಹೆಚ್ಚಾ­ಗು­ತ್ತದೆ.
ಇದ­ನ್ನೆಲ್ಲಾ ನೋಡಿ­ದಾಗ `ಅಬ್ಬಾ! ಎಂತಹ ತಂತ್ರ­ಜ್ಞಾನ? ಆಗ­ಬ­ಹುದು' ಎಂದು ಕೊಂಡರೆ ತಪ್ಪಾ­ಗು­ತ್ತದೆ. `ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ' ಆಗು­ತ್ತದೆ. ಕಾಂಡ­ವನ್ನೇ ತಿಂದು ಜೀರ್ಣಿ­ಸಿ­ಕೊ­ಳ್ಳುವ ಹುಳು­ಗಳೇ ಸಾಯ­ಬೇ­ಕಾ­ದರೆ. ಬದ­ನೆ­ಯನ್ನು ನಿತ್ಯದ ಆಹಾ­ರ­ಗ­ಳಲ್ಲಿ ಒಂದಾ­ನ್ನಾ­ಗಿಸಿ ಕೊಂಡ ಮನು­ಷ್ಯನ `ಗತಿ' ಎನಾ­ಗ­ಬಾ­ರದು? ಇಂತಹ ಪ್ರಯೋಗ ಈಗಾ­ಗಲೇ ಉಡು­ಪಿಯ ಮಟ್ಟು­ಗು­ಳ್ಳದ ಮೇಲಾ­ಗಿ­ರು­ವುದು ವಿಷಾ­ಧದ ಸಂಗತಿ.
ಕುಲಾಂ­ತರಿ ಬದನೆ ತಿಂದರೆ ನರ­ನಿಗೆ ಪ್ರಾಂಭ­ವಾ­ಗ­ಬ­ಹುದು ನರ­ಳಾಟ:
ಬಿಟಿಯ ದುಷ್ಪ­ರಿ­ಣಾ­ಮದ ಬಗ್ಗೆ ಹೇಳು­ವಾಗ ಬಿಟಿ ಹತ್ತಿ ನೆನ­ಪಾ­ಗು­ತ್ತದೆ. ಯಾವುದೇ ಕೀಟ­ಗಳು ದಾಳಿ ಮಾಡಲು ಸಾಧ್ಯ­ವಿಲ್ಲ ಎನ್ನುವ ಬಿಟಿ ತಳಿ­ಗ­ಳಿಗೆ ರಸ­ಹೀ­ರುವ ಕೀಟ­ಗಳು ದಾಳಿ­ನ­ಡೆ­ಸು­ತ್ತವೆ ಎನ್ನು­ವು­ದನ್ನು ಸರ್ಕಾರಿ ದಾಖ­ಲೆ­ಗಳು ಹೇಳು­ತ್ತವೆ. ಬಿಟಿ ಹತ್ತಿ­ಯನ್ನು ಬೆಳೆದ ರೈತ ಕೀಟ­ನಾ­ಶ­ಕ­ವನ್ನು ಬಳ­ಸ­ಬೇ­ಕಾ­ಗು­ತ್ತದೆ. ಅದಕ್ಕೆ ಮತ್ತಷ್ಟು ಹಣ­ವನ್ನು ವ್ಯಯ ಮಾಡ­ಬೇ­ಕಾ­ಗು­ತ್ತದೆ. ಬಿಟಿ­ಹತ್ತಿ ಬೆಳೆದ ಆಂದ್ರ­ಪ್ರ­ದೇ­ಶದ ವಿಧರ್ಭ ಪ್ರಾಂತ್ಯದ ರೈತರೇ ಆತ್ಮ­ಹತ್ಯೆ ಮಾಡಿ­ಕೊಂ­ಡ­ವ­ರಲ್ಲಿ ಹೆಚ್ಚು.
ಬೆಳೆಯ ನಂತರ ಗಿಡದ ಬಿಟಿ ಜೀನ್‌ ಮಣ್ಣಿನ ಬ್ಯಾಕ್ಟೀ­ರಿಯಾ ವರ್ಗಾ­ವ­ಣೆ­ಯಾ­ಗುವ ಸಾಧ್ಯತೆ ಇದೆ. ಬಿಟಿ ಬೀಟ್‌­ರೂ­ಟ್‌­ನಲ್ಲಿ ಇದು ಆಗಿದೆ. `ಮಣ್ಣಿನ ಸೂಕ್ಷ್ಮ­ಜೀ­ವಿ­ಗಳ ಮೇಲೆ ಬಿಟಿ­ಯಿಂ­ದಾ­ಗುವ ಪರಿ­ಣಾ­ಮದ ಅಧ್ಯ­ಯ­ನ­ಗಳು ಆಗಿಲ್ಲ' ಎನ್ನು­ತ್ತಾರೆ ಹಿರಿಯ ವಿಜ್ಞಾನಿ ಡಾ.ಬಾಲ­ರವಿ.
ಇನ್ನೂ ಬಿಟಿ­ಬ­ದ­ನೆ­ಯನ್ನು ತಿಂದ ಮನು­ಷ್ಯನ ಜೀರ್ಣಾಂ­ಗದ ಕರು­ಳಿನ ಬ್ಯಾಕ್ಟೀ­ರಿ­ಯಾಕ್ಕೆ ವರ್ಗಾ­ವ­ಣೆ­ಯಾ­ಗುವ ಸಂಭವ ಹೆಚ್ಚಿದೆ. ಇದ­ರಿಂದ ರೋಗ ನಿರೋ­ಧಕ ಶಕ್ತಿಯ ಮೇಲೆ ಅಡ್ಡ ಪರಿ­ಣಾಮ ಬೀರು­ವುದು ಮಾತ್ರ­ವ­ಲ್ಲದೇ ಜೀವ­ಕೋ­ಶ­ಗಳು ಅಸ­ಹ­ಜ­ವಾಗಿ ಬೆಳೆ­ಯುವ ಸಾಧ್ಯ­ತೆ­ಯಿದೆ. ಬಿಟಿಯ ಉಪು­ತ್ಪ­ನ್ನ­ಗ­ಳನ್ನು ತಿಂದ ದನ­ಕ­ರು­ಗಳು, ಕುರಿ­ಗಳು ಸಾವ­ನ್ನ­ಪ್ಪಿ­ರು­ವುದು ಕಂಡು­ಬಂ­ದಿದೆ. ಬಿಟಿ ತಳಿ­ಗ­ಳನ್ನು ಬೆಳೆ­ಯುವ ಪ್ರದೇ­ಶ­ಗ­ಳಲ್ಲಿ ಕೆಲಸ ಮಾಡು­ವ­ವ­ರಿಗೆ ಅಲರ್ಜಿ, ತುರಿಕೆ, ದದ್ದು­ಗಳು ಎದ್ದ ವರ­ದಿ­ಗಳು ಈಗಾ­ಗಲೇ ಪ್ರಕ­ಟ­ಗೊಂ­ಡಿದೆ.
ಇದ­ಲ್ಲೆ­ಕ್ಕಿಂತ ಹೆಚ್ಚಾಗಿ ನಮ್ಮ ರಾಜ್ಯ­ದಲ್ಲಿ ಸಾವ­ಯವ ಕೃಷಿ ನೀತಿ­ಯನ್ನು ಜಾರಿ­ಗೊ­ಳಿ­ಸಿದೆ. ಸಾವ­ಯವ ಮಿಷನ್‌ ಕೆಲಸ ಮಾಡು­ತ್ತಿದೆ. ಸಾವ­ಯವ ಗ್ರಾಮ­ಗಳು ರಚಿ­ತ­ವಾ­ಗಿದೆ. ಹೀಗಿ­ರು­ವಾಗ ಕುಲಾಂ­ತರಿ ತಳಿ­ಯಲ್ಲಿ ಕೃಷಿ ಮಾಡಿ­ದರೆ ಸಾವ­ಯವ ಧೃಢೀ­ಕ­ರಣ ನೀಡು­ವಂ­ತಿಲ್ಲ. ಸಾವ­ಯವ ರೀತಿ­ಯ­ಲ್ಲಿಯೇ ಬಿಟಿ ತಳಿ­ಗ­ಳನ್ನು ಬೆಳೆ­ಸಿ­ದ್ದರೂ `ಸಾವ­ಯವ ಲೇಬಲ್‌' ಹಚ್ಚಿ ಮಾರು­ವಂ­ತಿಲ್ಲ.
ಏಕ­ಸ್ವಾ­ಮ್ಯದ ಹುನ್ನಾ­ರವೇ?
`ಜೀನ್‌' ತಂತ್ರ­ಜ್ಞಾನ ಸಾಮಾನ್ಯ ಜನ­ರಿಗೆ ಸಿಗು­ವು­ದಿಲ್ಲ. ಯಾಕೆಂ­ದರೆ, ಅವು­ಗಳ ಪೇಟೆಂಟ್‌ ಬಹು­ರಾ­ಷ್ಟ್ರೀಯ ಕಂಪ­ನಿಯ ಕಪಿ­ಮು­ಷ್ಟಿ­ಯ­ಲ್ಲಿದೆ. ಕುಲಾಂ­ತರಿ ತಳಿ­ಯನ್ನು ಬೆಳೆಯ ಬೇಕೆಂ­ದರೆ ಕಂಪ­ನಿಗೆ ಮಾರು­ಹೋ­ಗ­ಬೇಕು. ಅವರು ನೀಡುವ ಜೀಬ­ವನ್ನೇ ಬಿತ್ತ­ಬೇಕು. ಕುಲಾಂ­ತರಿ ತಳಿ­ಗ­ಳಿಂದ ಬೀಜ­ವನ್ನು ದ್ವಿಗು­ಣ­ಗೊ­ಳಿ­ಸ­ಲಿಕ್ಕೆ ಸಾಧ್ಯ­ವಿಲ್ಲ. ಇಳು­ವ­ರಿ­ಯನ್ನು ಮನ­ದ­ಲ್ಲಿ­ಟ್ಟು­ಕೊಂಡು `ಕುಲಾಂ­ತರಿ'ಯನ್ನು ಬೆಳೆ­ಸ­ಲಿಕ್ಕೆ ತೋಡ­ಗಿ­ದರೆ `ಬಿತ್ತನೆ ಬೀಜ­ಕ್ಕಾಗಿ' ಪರ­ದಾ­ಡು­ವುದು ತಪ್ಪು­ವು­ದಿಲ್ಲ. ಕಂಪ­ನಿ­ಗಳು ನಮ್ಮ­ಲ್ಲಿನ ವೈವಿ­ಧ್ಯ­ತೆ­ಯನ್ನು ನಾಶ ಮಾಡಿ `ಏಕ­ರೂಪ ಕೃಷಿ'ಯನ್ನು ಹೇರು­ವು­ದಕ್ಕೆ ಪ್ರಯ­ತ್ನಿ­ಸು­ತ್ತಿ­ರು­ವುದು ಇವರ ಪ್ರಯೋ­ಗ­ಗ­ಳಿಂದ ತಿಳಿ­ಯು­ತ್ತದೆ. ಅಂದರೆ ಇವರ ಮೂಲ ಉದ್ದೇಶ ರೈತ­ರಿಗೆ ಬೇಕಾ­ಗುವ ಬಿತ್ತನೆ ಬೀಜದ ಮೇಲೆ ಏಕ­ಸ್ವಾ­ಮ್ಯ­ವನ್ನು ಹೊಂದು­ವುದು ಎನ್ನು­ವುದು ಸ್ಪಷ್ಟ. ಒಂದು ದೃಷ್ಟಿ­ಯಿಂದ ನೋಡಿ­ದರೆ `ಅಮಲು ಪದಾ­ರ್ಥದ' ಚಟ್ಟ­ದಂತೆ ರೈತ­ರಿಗೆ ತಾವು ತಯಾ­ರಿ­ಸಿದ ಬಿಟಿ ತಳಿ­ಗ­ಳಿಂದ ಮಾಡ­ಲಿಕ್ಕೆ ಹೊರ­ಟಿ­ರು­ವುದು ಸ್ಪಷ್ಟ­ವಾ­ಗು­ತ್ತದೆ.
ಕುಲಾಂ­ತರಿ ವಿರುದ್ಧ ಹೋರಾಟ:
ಅಂತ­ರಾ­ಷ್ಟ್ರೀಯ ಪರಿ­ಸ­ರ­ಪರ ಸಂಘ­ಟ­ನೆ­ಗಳು `ಜಿ.ಎಂ. ಆಹಾ­ರದ ವಿರುದ್ಧ ಈಗಾ­ಗಲೇ ದನಿ ಎತ್ತಿ ಹೋರಾ­ಟ­ವನ್ನು ಮಾಡು­ತ್ತಿ­ದ್ದಾರೆ. ದೆಹ­ಲಿ­ಯಲ್ಲಿ ರೈತರು ಬೀದಿಗೆ ಇಳಿದು ಹೋರಾ­ಟ­ವನ್ನು ಮಾಡಿ­ದ್ದಾರೆ. ಕೇಂದ್ರ ಆಹಾರ ಮಂತ್ರಿ ಅಂಬು­ಮಣಿ ರಾಮ­ದಾಸ್‌ ಕುಲಾಂ­ತರಿ ಬೇಡ ಎನ್ನುವ ಅಭಿ­ಪ್ರಾ­ಯ­ವನ್ನು ವ್ಯಕ್ತ ಪಡಿ­ಸಿ­ದ್ದಾರೆ. ಕರ್ನಾ­ಟ­ಕ­ದಲ್ಲೂ ಸಹಜ ಸಮೃದ್ಧ, ಗ್ರೀನ್‌­ಪೀಸ್‌ ಮುಂತಾದ ಸಂಘ­ಟ­ನೆ­ಗಳು ರೈತ ಸಂಘದ ಜೊತೆ­ಗೂಡಿ ` ನಾನೂ ಪ್ರಯೋಗ ಪಶು­ವಲ್ಲ' ಎನ್ನುವ ಚಳು­ವ­ಳಿ­ಯನ್ನು ಕುಲಾಂ­ತ­ರಿಯ ವಿರುದ್ಧ ರೂಪಿ­ಸಿದೆ. ಇವ­ರಿಗೆ ಉಡುಪಿ ಪೇಜಾ­ವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ರಾಮ­ಚಂ­ದ್ರಾ­ಪುರ ಮಠದ ಶ್ರೀರಾ­ಘ­ವೇ­ಶ್ವರ ಸ್ವಾಮೀಜಿ, ಸಾಹಿತಿ ಯು.ಆರ್‌. ಅನಂ­ತ­ಮೂರ್ತಿ ಮುಂತಾದ ಚಿಂತ­ಕರು ಬೆಂಬ­ಲ­ವನ್ನು ವ್ಯಕ್ತ ಪಡಿ­ಸಿ­ದ್ದಾರೆ.
ಕೊನೆ­ಯಲ್ಲಿ: ಕುಲಾಂ­ತರಿ ಬದನೆ ರೈತರ ಹೊಲಕ್ಕೆ ಬರಲು ಬಿಟ್ಟರೆ, ಅವು­ಗಳ ಹಿಂದೆ ಬಿಟಿ ಭತ್ತ, ಆಲೂ, ಟೊಮೆಟೋ, ಪಪ್ಪಾಯ, ಸೋಯಾ, ಮೆಕ್ಕೆ ಜೋಳ ಸಾಲಾಗಿ ಅಂಗ­ಳ­ದ­ಲ್ಲಯೇ ಕಾಯುತ್ತ ನಿಂತಿವೆ. ಕುಲಾಂ­ತ­ರಿಯ ಪ್ರಯೋಗ ಫಲಿ­ತಾಂಶ ಸಾರ್ವ­ಜ­ನಿ­ಕ­ರೆ­ದುರು ಪಾರ­ದ­ರ್ಶ­ಕ­ವಾಗಿ ತೆರೆ­ದಿ­ಡ­ಬೇಕು ಎನ್ನುವ ಆಗ್ರಹ ಸಂಘ­ಟ­ನೆ­ಗ­ಳದ್ದು.
ರೈತರ ಪ್ರಗತಿ ನೆಪ ಮಾಡಿ­ಕೊಂಡು ಕಂಪ­ನಿ­ಗಳು ಸಾಂಪ್ರ­ದಾ­ಯಿಕ ಕೃಷಿ ಹಾಳು­ಮಾ­ಡಲು ಹೊರ­ಟಿ­ರುವ `ತಂತ್ರ'ಜ್ಞಾನ ನಮಗೆ ಬೇಕೆ?


ನಾಗ­ರಾಜ ಮತ್ತಿ­ಗಾರ


ಉದಯವಾಣಿ ಕೃಷಿ ಸಂಪದದಲ್ಲಿ ಪ್ರಕಟಗೊಂಡ ಲೇಖನ