Sunday, January 11, 2009

ಅಡಿಕೆಗೆ ಹೋದ ಮಾನ: ಬರುವುದು ಯಾವಾಗ



ಇಂದಿನ ಸರಕಾರದಲ್ಲಿ ಅಡಿಕೆ ಬೆಳೆಯುವ ಪ್ರದೇಶದಿಂದ ಆರಿಸಿಬಂದ ಸಿ.ಎಂ ಹಾಗೂ ಇತರ ಮಂತ್ರಿಗಳಿದ್ದರೂ ಅಡಿಕೆ ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.ಇತರ ವಸ್ತುಗಳ ಬೆಲೆ ಹೆಚ್ಚುತ್ತಿದ್ದರೆ ಅಡಿಕೆಯ ಬೆಲೆ ಮಾತ್ರ ದಿನದಿಂದ ದಿನಕ್ಕೆ ಕುಸಿಯುತ್ತಿದೆ.ಅತಂತ್ರ ಬದುಕಿನಲ್ಲಿ ಒದ್ದಾಡುತ್ತಿರುವ ಬೆಳೆಗಾರ ಸರಕಾರಕ್ಕೆ ಬೆಂಬಲ ಬೆಲೆ ನೀಡುವಂತೆ ಮಾಡಿದ ಮನವಿಗೆ ಸರಕಾರ “ನೋ” ಹೇಳಿದ್ದು ಬರಸಿಡಿಲಿನಂತೆ ಎರಗಿದೆ.
“ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು” ಎಂಬ ನಾಡ್ನುಡಿ ಅಕ್ಷರಶ: ಅಡಿಕೆ ಬೆಳೆಗಾರ ಪಾಲಿಗೆ ನಿಜವಾಗಿದೆ.
ಒಂದು ಕಡೆ ಬೆಳೆ ಇದ್ದರೆ ಬೆಲೆ ಇಲ್ಲ.ಜೊತೆಗೆ ಹವಮಾನ ವೈಪರಿತ್ಯದಿಂದ ಪ್ರತಿ ವರ್ಷ ಒಂದಲ್ಲ ಒಂದು ಹೊಸ ರೋಗ ಅಡಿಕೆಗೆ ಪೂರಕ ಬೆಳೆಗೆ ದಾಳಿ ಇಡುತ್ತಿದ್ದು ಅಡಿಕೆ ಕೃಷಿಕರನ್ನು ಕಂಗೇಡಿಸಿದೆ.ಮತ್ತೊಂದು ಕಡೆ ದರ ವೈಪರಿತ್ಯವನ್ನು ಅನುವಿಸುತ್ತಿರುವ ಅಡಿಕೆ ಬೆಳೆಗಾರರು ,ಎಲ್ಲರೀತಿಯಿಂದಲೂ “ಅಡಕತ್ತರಿಯಲ್ಲಿ ಸಿಕ್ಕ ಅಡಿಕೆ”.ಇತರರಿಗೆ ಮಾತ್ರ “ಶ್ರೀಮಂತ ಬೆಳೆಗಾರ”
ಮಲೆನಾಡು,ಕರಾವಳಿ ಪ್ರದೇಶವಾದ ಶಿರಸಿ,ಸಿದ್ದಾಪುರ,ಯಲ್ಲಾಪುರ,ಸಾಗರ,ಶಿವಮೊಗ್ಗ,ಹೊಸನಗರ,ದಕ್ಷಿಣಕನ್ನಡ ಜಿಲ್ಲೆಗಳಲ್ಲಿ,ಹಾಗೂ ಈಗ ಬಯಲು ಸೀಮೆ,ಕಡೂರು,ಬೀರೂರುಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಬೆಳೆಯಲಾಗುತ್ತಿದೆ. ಈ ಹಿಂದೆ ಅಟಲ್‌ ಬಿಹಾರಿ ವಾಜ್‌ ಪೇಯಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಅಡಿಕೆಯ ಸಮಸ್ಯೆಯನ್ನು ಹತ್ತಿರದಿಂದ ಬಲ್ಲವರಾಗಿದ್ದ ಅಂದಿನ ವಾಣಿಜ್ಯ ಮಂತ್ರಿ ದಿ.ರಾಮಕೃಷ್ಣಹೆಗಡೆ ಅವರು ಅಡಿಕೆಗೆ ಬಂಗಾರದ ಬೆಲೆಯನ್ನು ,ವಿದೇಶಿ ಅಡಿಕೆಗೆ ಅಧೀಕ ತೆರಿಗೆ ವಿಧಿಸುವುದರ ಮೂಲಕ,ಇತರ ಬಿಗಿಯಾದ ವಾಣಿಜ್ಯ ನೀತಿಯಿಂದ ದೊರಕಿಸಿಕೊಟ್ಟಿದ್ದರು.ಇದರಿಂದ ಅಡಿಕೆ ಬೆಳೆಗಾರ ಸಂಖ್ಯೆ ಹೆಚ್ಚಿತು.ಕೇವಲ ಪ್ರಾದೇಶಿಕವಾಗಿ ಬೆಳೆಯುವ ಪ್ರದೇಶದಾಚೆ ಇದರ ಬೆಳೆಯುವರು ಸಹ ಹೆಚ್ಚಾದರು.ಬೆಲೆ ಏರಿಕೆಯಿಂದ ತಮ್ಮ ಜೀವನ್ದ ಮೌಲ್ಯವನ್ನು ಹೆಚ್ಚಿಸಿಕೊಂಡ ಅಡಿಕೆ ಬೆಳೆಗಾರರು ನಂತರ ದಿನಗಳಲ್ಲಿ ಹಿಡಿತ ಕಳೆದುಕೊಂಡ ನೀತಿಯಿಂದಾಗಿ ಮತ್ತು ಇತರ ಕಾರಣಗಳಿಂದ ಅಡಿಕೆಯ ದರ ಬೀಳುತ್ತ ನೆಲಕಚ್ಚಿದರೆ,ಆಗ ಏರಬಹುದು,ಈಗ ಏರಬಹುದು ಎಂಬ ಆಸೆಯಿಂದ ಬೆಳೆಗಾರ ಕಾಲ ತಳ್ಳುತ್ತಿದ್ದಾರೆ.ಸರಕಾರ ಈ ಹಿಂದೆ ಬೆಂಬಲ ಬೆಲೆಯನ್ನು ಘೋಷಿಸಿದರೂ ಹೆಚ್ಚಿನ ಜನರಿಗೆ ಪ್ರಯೋಜನ ಸಿಗದೇ ಸೋತಿತು.ಈಗ ಮತ್ತೆ ದರ ಏರಿಳತಕ್ಕೆ ಒಳಗಾಗುತ್ತಿರುವ ಅಡಿಕೆ ಬೆಳೆಗಾರರನ್ನು ಚಿಂತಾಕ್ರೀತರನ್ನಾಗಿ ಮಾಡಿದೆ.ಈ ವರ್ಷ ಮತ್ತೆ ಬೆಂಬಲ ಬೆಲೆ ನೀಡಿ ಬೆಳೆಗಾರರಿಗೆ ಚೈತನ್ಯ ನೀಡಿ ಎಂದು ಬೆಳೆಗಾರರು ಮಾಡಿದ ಮನವಿಗೆ ಸರಕಾರ “ನೋ” ಎಂದು ಹೇಳಿದೆ.ಇದು ಬೆಳೆಗಾರರನ್ನು ಕಂಗೇಡಿಸಿದೆ. ಈ ಹಿಂದೆ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್‌. ಸಮ್ಮೀಶ್ರ ಸರಕಾರ ಇದ್ದಾಗ ಅಂದಿನ ಸಚಿವರಾಗಿದ್ದ ಶಿವಾನಂದ ನಾಯ್ಕ,ನಾಗರಜ ಶೆಟ್ಟಿ ಮುಂತಾದ ಬಿ.ಜೆ.ಪಿ. ಮುಖಂಡರು ಅಡಿಕೆ ಬೆಳೆಗಾರರ ಸಬೆಕರೆದು ,ಬೆಳೆಗಾರರ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತಂದು ಪರಿಹರಿಸುವ ರವಸೆ ನೀಡಲಾಗಿತ್ತು.ಆದರೆ ಇಂದು ಸರಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಯಾದಿಯಾಗಿ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ,ಹಾಲಪ್ಪ,ಕೃಷ್ಣಶೆಟ್ಟಿ,ಸದಾನಂದ ಗೌಡ ಮುಂತಾದವರು ಅಡಿಕೆ ಬೆಳೆಯುವ ಪ್ರದೇಶದಿಂದ ಬಂದವರಾಗಿದ್ದು ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ.ಅಂದು ಸಮ್ಮೀಶ್ರ ಸರಕಾರದಲ್ಲಿ ಆಸಕ್ತಿ ತೋರಿಸಿದವರು ಇಂದು ಅವರದೇ ಸರಕಾರ ಆಡಳಿತದಲ್ಲಿ ಇರುವುದರಿಂದ ಅಡಿಕೆ ಬೆಳೆಗಾರರು ತಮ್ಮ ಕೇಲಮೊಂದು ಸಮಸ್ಯೆಗಾದರೂ ಪರಿಹಾರ ಸಿಗಬಹುದು ಎಂದು ಆಶೀಸಿದ್ದರು.
ಅಡಿಕೆಯನ್ನು ಕಮಾಡಿಟಿ ಎಕ್ಸ್ಚೆಂಜ್‌ ನಲ್ಲಿ ಸೇರಿಸಿರುವುದು ,ಶೇರು ಮಾರುಕಟ್ಟೆ ಕುಸೀತ,ಆರ್ಥೀಕ ಕುಸಿತ ಅಡಿಕೆ ಬೆಲೆಗೆ ಹೊಡೆತ ನೀಡಿದರೆ ,ಕುಸಿಯುತ್ತಿರುವ ಆರ್ಥೀಕ ಸ್ಥಿತಿಯಲ್ಲಿ ಅದು ಜೀವನದ ಅವಶ್ಯಕ ವಸ್ತು ಅಲ್ಲದೇ ಇರುವುದರಿಂದ ಸರಕಾರ ಬೆಂಬಲ ಬೆಲೆ ನೀಡಲು ನಿರಾಕರಿಸಿದರೂ ಅಡಿಕೆ ಒಂದು ಕೃಷಿಯ ಅಂಗವಾಗಿದೆ.ಅಡಿಕೆ ಬೆಳೆಗಾರರಿಗೆ ಬೇರೆ ಬೆಳೆ ಇಲ್ಲದೇ ಪುರಾತನ ಕಾಲದಿಂದ ಕುಲ ಕಸುಬಾಗಿ ಬೆಳೆದುಕೊಂಡು ಬರಲಾಗುತ್ತಿದೆ.ಹೆಚ್ಚಿನದಾಗಿ ಗುಟ್ಕಾಕ್ಕೆ ಅಡಿಕೆ ಹೋಗುತ್ತದೆ ಆದರೂ ಪರ್ಯಾಯ ಬಳಕೆಯ ಬಗ್ಗೆ ಸಾಕಷ್ಟು ಸಂಶೋಧನೆ ಆಗದೇ ಇರುವುದು ಅಡಿಕೆ ಬೆಳೆಗಾರರಿಗೆ ಸಾಕಷ್ಟು ಹೊಡೆತ ನೀಡಿದೆ.ಸಂಶೋಧನೆಗೆ ತೋಡಗಿರುವವರಿಗೂ ಸಾಕಷ್ಟು ಪ್ರೋತ್ಸಾಹ ಸಿಗದೆ ಅವರ ಸಂಶೋಧನೆ ನೆಲ ಕಚ್ಚುತ್ತಿದೆ. ರೈತರಿಗೆ ವ್ಯವಹಾರಿಕವಾಗಿ ದರ,ಕ್ಯಾಂಪ್ಕೊದಂತಹ ಸಂಸ್ಥೆಗೆ ದರ ನೆಲಕಚ್ಚಿದಾಗ ಹೆಚ್ಚಿನ ದರದಲ್ಲಿ ಬೆಳೆಯನ್ನು ಖರಿದಿಸುವ ವ್ಯವಸ್ಥೆಗೆ ಆರ್ಥಿಕ ಸಹಕಾರ ,ಹೆಚ್ಚುತ್ತಿರುವ ಇತರ ವಸ್ತುಗಳ ಬೆಲೆ,ಕೂಲಿ,ಗೊಬ್ಬರ ಇತರ ಖರ್ಚನ್ನು ಗಮನಿಸಿ ನೂತನವಾಗಿ ಬೆಂಬಲ ಬೆಲೆ ಘೋಷಿಸುವುದು ಅಗತ್ಯವಾಗಿದೆ.ಇಂದು ಕೆಂಪಡಕಿಗೆ 8-9 ಸಾವಿರ ರೂ ಮತ್ತು ಚಾಲಿ (ಬಿಳಿ) ಅಡಿಕೆಗೆ 6000-7000 ರೂ ದರ ಸಿಗುತ್ತಿದೆ.ಕೆಂಪಡಿಕೆಗೆ 13000 ರೂ.,ಚಾಲಿಗೆ 9000 ರೂ ಬೆಂಬಲ ಬೆಲೆ ಅಗತ್ಯವಾಗಿದೆ ಎಂದು ಬೆಳೆಗಾರರ ಅಭಿಪ್ರಾಯ.ಈಗಾಗಲೆ ಅನೇಕ ಕಡೆಗಳಲ್ಲಿ ಸುಗ್ಗಿ ಆರಂವಾಗಿದ್ದು ಬೆಂಬಲ ಬೆಲೆ ಇಲ್ಲ ಎಂದು ಹೇಳಿರುವುದು ಅಡಿಕೆ ಬೆಲೆ ಮೇಲೆ ಪರಿಣಾಮ ಬೀರುವುದು ನಿಶ್ಚಿತ.ಈ ಹಿಂದೆ ಧರ್ಮಸಿಂಗ್‌ ಮುಖ್ಯಮಂತ್ರಿಯಾಗಿದ್ದಾಗ ಅಡಿಕೆಗೆ ಬೆಂಬಲ ಬೆಲೆಯನ್ನು ಘೋಷಿಸಲಾಗಿತ್ತು.ಇದಕ್ಕೆ 10ಕೋಟಿ ರೂಗಳನ್ನು ಮಂಜೂರಿ ಮಾಡಿ ಅದರ ಮೂಲಕ ಅಡಿಕೆಗೆ ಚೈತನ್ಯ ತುಂಬುವ ಕೆಲಸವಾಗಿತ್ತು.ಚಾಲಿ ಅಡಿಕೆ 6000ರೂ ಮತ್ತು ಕೆಂಪಡಿಕೆಗೆ 10000ರೂಗಳ ಬೆಂಬಲ ಬೆಲೆಯಡಿಯಲ್ಲಿ ಪ್ರತಿ ರೈತರಿಂದ 5 ಕ್ವೀ. ಅಡಿಕೆಯನ್ನು ಖರಿದಿಸಲಾಗಿತ್ತು.ಬೆಂಬಲ ಬೆಲೆ ಘೋಷಣೆಯಿಂದ 4500 ರೂಗಿದ್ದ ಚಾಲಿ ಅಡಿಕೆ 7000 ರೂಗೆ ಏರಿದರೆ,7000ರದ ಆಸುಪಾಸಲ್ಲಿದ್ದ ಕೆಂಪಡಿಕೆ 10000 ರೂಗಿಂತ ಮೇಲಿನ ಪಡೆದಿತ್ತು.ಆದರೆ ಬೆಂಬಲ ಬೆಲೆ ನೀಡಿದ್ದು ಮಾತ್ರ ಮೇನಲ್ಲಿ!!. ಇದು ಸಾಕಷ್ಟು ಬೆಳೆಗಾರರಿಗೆ ಪ್ರಯೋಜನ ಸಿಗದೆ ಇದ್ದರೂ ಅಡಿಕೆ ಬೆಲೆಗೆ ಚೈತನ್ಯ ನೀಡಿತ್ತು.ಈ ವರ್ಷ ಬೆಂಬಲ ಬೆಲೆ ನೀಡಲು ಇದು ಸೂಕ್ತ ಸಮಯವಾಗಿತ್ತಾದರೂ ಸರಕಾರ ಈ ವರ್ಷ ಬೆಂಬಲ ಬೆಲೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

· “ಕಳ್ಳ” ಅಡಿಕೆ ತಂದಿತು ಆಪತ್ತು:
ಗೌಹಾಟಿ ಮುಂತಾದ ಕಡೆ ಅಡಕೆಯನ್ನು ಅರಣ್ಯಪ್ರದೇಶದಲ್ಲಿ ಬೆಳೆದು ದೊಡ್ಡ ಪ್ರಮಾಣದಲ್ಲಿ ಬಾರತಕ್ಕೆ ಕಳುಹಿಸುತ್ತಿರುವುದರಿಂದ ಮತ್ತು ಮಲೇಷಿಯಾ,ಶ್ರೀಲಂಕಾ ದೇಶಗಳಿಂದ ಕಡಿಮೆ ದರ್ಜೆಯ ಅಡಿಕೆಯನ್ನು ಕಳ್ಳ ವ್ಯವಸ್ಥೆಯಡಿಯಲ್ಲಿ ಬಾರತೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದರಿಂದ ಬಾರತೀಯ ಅಡಿಕೆಯ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರಿದೆ.ದಿ.ರಾಮಕೃಷ್ಣ ಹೆಗಡೆ ವಾಣಿಜ್ಯ ಮಂತ್ರಿಯಾದ ಸಂದರ್ದಲ್ಲಿ ಗ್ಲೋಬಲೈಸೆಶನ್‌ ಇದ್ದರೂ 33-4 ಕಾಯ್ದೆಯಡಿಯಲ್ಲಿ ಆಮದು ಅಡಿಕೆಗೆ ಶೇ.300ರಷ್ಟು ತೆರಿಗೆ ಮತ್ತು ಎಕ್ಸಿವ್‌ ನಿಯಮದಲ್ಲಿ ಹಿಡಿತ ತಂದು ಕಳ್ಳವ್ಯವಹಾರಕ್ಕೆ ಕೊನೆಗಾಣಿಸಿದ್ದರು.ಅದಲ್ಲದೇ ಪಾಕಿಸ್ಥಾನದ ಜೊತೆ ಒಳ್ಳೆ ಸಂಬಂಧ ಬೆಳೆಸಿ ,ಹೆಚ್ಚು ಅಡಿಕೆಯನ್ನು ಉಪಯೋಗಿಸುವ ಪಾಕಿಸ್ಥಾನಕ್ಕೆ ರಪ್ತುಮಾಡಲು ಶ್ರಮಿಸಿದ್ದರು.ಗಡಿ ಸಮಸ್ಯೆಯ ಕರಿ ನೆರಳು ಈಗ ಮತ್ತೆ ಅಲ್ಲಿಗೆ ರಪ್ತು ಮಾಡಲು ತಡೆಯಾಗಿದೆ.ಇದರಿಂದಲೂ ಅಡಿಕೆಗೆ ಅಷ್ಟು ಬೇಡಿಕೆ ಕುಸಿದಂತಾಗಿದೆ.ಬೆಲೆ ಬಂದಾಗ ಮತ್ತು ಸ್ವಲ್ಪ ಕೃಷಿ ಕಾರ್ಯ ಸ್ವಲ್ಪ ಏರುಪೇರಾದರೂ ನಡೆಯುತ್ತದೆ ಎಂದು ಎಲ್ಲ ಪ್ರದೇಶದಲ್ಲಿ ಬೆಳೆಯಲು ಆರಂಭಿದ್ದು ಸಹ ಬೆಲೆ ಯ ಮೇಲೆ ದುಷ್ಪರೀಣಾಮ ಬೀರಿತು. “ಸರಕಾರ ಅಥವಾ ನಬಾರ್ಡ್‌ ಕೃಷಿ ಯೋಜನೆಗಳನ್ನು ತಂದು ಪ್ರಾದೇಶಿಕ ಬೆಳೆಗಳನ್ನು ಆಯಾ ಪ್ರದೇಶದಲ್ಲಿ ಸೀಮಿತಗೊಳಿಸಬೇಕು.ಇದರಿಂದ ಬೆಳೆಗಳಲ್ಲಿ ಸಮತೋಲನ ಉಂಟಾಗುತ್ತದೆ.ಆಯಾಪ್ರದೇಶದಲ್ಲಿ ಪ್ರಾದೇಶಿಕವಾಗಿ ಇರುವ ಬೆಳೆಗೆ ಮಾತ್ರ ಹೆಚ್ಚಿನ ಪ್ರಯೋಜನ ನೀಡುವಂತಾದರೆ,ಗೋದಿ ಬೆಳೆಯುವಲ್ಲಿ ಅಡಿಕೆ ಬೆಳೆಯುವುದಿಲ್ಲ.ಅಡಿಕೆ ಬೆಳೆಯುವಲ್ಲಿ ಕಾಫಿ ಬೆಳೆಯದೆ ಯಾವುದೇ ಬೆಳೆಗಳ ಮೇಲೆ ಆಗುವ ದುಷ್ಪರೀಣಾಮವನ್ನು ತಡೆಗಟ್ಟಬಹುದು” ಎಂದು ಅಭಿಪ್ರಾಯಪಡುತ್ತಾರೆ ಅಡಿಕೆ ಕೃಷಿಕ ಯಲ್ಲಾಪುರದ ಪ್ರಮೋದ ಹೆಗಡೆ.
“ಇಂದು ಅಡಿಕೆ ಉತ್ಪಾದನೆಗೆ ಖರ್ಚು ಹೆಚ್ಚಾಗುತ್ತಿದ್ದು ಬೆಲೆ ಕುಸಿಯುತ್ತಿದೆ.ನುರಿತ ಕೆಲಸಗಾರರ ಅಬಾವ ಉಂಟಾಗುತ್ತಿದ್ದು,ರೋಗಗಳ ಹಾವಳಿ ಮೀತಿ ಮೀರುತ್ತಿದೆ.ಸರಕಾರ ಮಾರ್ಕೇಟಿಂಗ್‌ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿ ಸಂಸ್ಥೆಗಳಿಗೆ ರೈತರ ಮಾಲನ್ನು ಬೆಲೆ ಬರುವ ತನಕ ಹಿಡಿದಿಟ್ಟುಕೊಳ್ಳಲು ಅಥವಾ ಹೆಚ್ಚಿನ ಬೆಲೆಗೆ ಇದನ್ನು ಖರಿದಿಸಲು ಸಾಲ ಸೌಲ್ಯ ನೀಡಬೇಕು” ಎಂದೆನ್ನುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ತಾಲೂಕ ಕೃಷಿಕ ಸಮಾಜದ ಅಧ್ಯಕ್ಷ ಎನ್‌.ವಿ.ಹೆಗಡೆ.
· ತಂಬಾಕು / ಅಡಿಕೆ:
ಅಡಿಕೆ ಮತ್ತು ತಂಬಾಕಿಗೆ ಮೊದಲಿನಿಂದಲೂ ವೈರತ್ವ!!.ಅಡಿಕೆ ಮತ್ತು ತಂಬಾಕಿನ ಲಾಬಿ ಇಂದು ನಿನ್ನೆಯದಲ್ಲ..ಮೊದಲಿನಿಂದಲೂ ಅಡಿಕೆಯ ಮೇಲೆ ಸವಾರಿ ಮಾಡುತ್ತಿರುವ ತಂಬಾಕಿನ ಲಾಬಿ,ಅಡಿಕೆ ವಿಷಕಾರಿ ಎಂದು ಪ್ರಚಾರಮಾಡಿತು.ಗುಟ್ಕಾದಲ್ಲಿನ ವಿಷಕಾರಿ ಪದಾರ್ಥ ಅಡಿಕೆಗೆ ಮಾರಕವಾಗಿ ಅಡಿಕೆಯೇ ವಿಷಕಾರಿ ಪಟ್ಟಿಯಲ್ಲಿದೆ!.ಅದಿಕೆಯಲ್ಲಿರುವ ಅನೇಕ ಉಪಯೋಗಹೊಂದಿದ ಅಂಶಗಳ ಪ್ರಚಾರ ಅವಶ್ಯವಾಗಿದೆ.ಗುಟ್ಕಾದಲ್ಲಿನ ವಿಷ ಪದಾರ್ಥ ಕಡಿಮೆ ಮಾಡಿ ಅಡಿಕೆ ಆರೋಗ್ಯಕ್ಕೆ ಉತ್ತಮ ಎಂಬ ಬಿರುದು ಬೇಕಾಗಿದೆ.
· ಬೇಕಿದೆ ಸಹಾಯ ಹಸ್ತ:ಅಡಿಕೆಯ ಸಂಪೂರ್ಣ ಬೆಲೆ ನಿಯಂತ್ರಿಸುವವರು ಇತರ ರಾಜ್ಯದ ದೊಡ್ಡ ದೊಡ್ಡ ವ್ಯಾಪರಸ್ಥರು.ಕೋಟ್ಯಾಂತರ ವ್ಯವಹಾರ ನಡೆಸುವರು ಇವರೆ.ಆದರೆ ಗುಟ್ಕಾಕೆ ಹೋಗುವ ಅಡಿಕೆ ಕಡಿಮೆ ದರ್ಜೆಯದು ಮತ್ತು ಕೆಲಮೊಂದು ಮದ್ಯಮದರ್ಜೆಯ ಅಡಿಕೆ ಅಲ್ಪ ಪ್ರಮಾಣದಲ್ಲಿ ಬಳಕೆಯಾಗುತ್ತದೆ.ಆದರೆ ಇತರ ದರ್ಜೆಯ ಅಡಿಕೆ ಎಲ್ಲಿಗೆ ಹೋಗುತ್ತದೆ ಯಾರಿಗೂ ತಿಳಿದಿಲ್ಲ.ಅಡಿಕೆಗೆ ಕಡಿಮೆ ರೇಟು ಬಿದ್ದಿದೆ ಎಂದು ಕಡಿಮೆ ಬೆಲೆಗೆ ಖರಿದಿಸಿ ಹೆಚ್ಚಿನ ಲಾ ಮಾಡಿಕೊಳ್ಳುವ ವ್ಯಾಪರಸ್ಥರಿಗೆ ಕಡಿವಾಣ ಹಾಕಲು ಸರಕಾರ ಕ್ಯಾಂಪ್ಕೊ ಮತ್ತು ಶಿವಮೊಗ್ಗದ ಸಂಸ್ಥೆಗೆ 10 ಕೋಟಿರೂಗಳ ನೆರವು ನೀಡಿದ್ದರೂ ಬೆಲೆ ಏರಿಸಲು ಮತ್ತು ಮಾಲನ್ನು ಬೆಲೆ ಬರುವ ತನಕ ರಕ್ಷಿಸಲು ಏನೇನು ಸಾಲದು.ರೈತರಿಗೆ ಮಾಲನ್ನು ಕೆಡದಂತೆ ಹೆಚ್ಚಿನದಿನ ಬರುವಂತೆ ರಕ್ಷಿಸಲು ಔಷಧಿ ಸಾಮಗ್ರಿಗಳ ಸೌಲ್ಯ,ಗೊಡೊನ್‌ ಗಳ ವ್ಯವಸ್ಥೆ,ಆಗಬೇಕಿದೆ.
ಅಡಿಕೆ ಪ್ರಕೃತಿ ಮೇಲೆ ಅವಲಂಬಿಸಿದ್ದು ,ರೋಗಾಣುಗಳ ದಾಳಿ,ಹೊಸ-ಹೊಸ ರೋಗಗಳ ಹೆಚ್ಚಿದೆ.ಬಣ್ಣದ ರೋಗ,ಅಡಿಕೆ ಮಿಳ್ಳೆ ಉದುರುವ ರೋಗ,ಚಂಡೆ ರೋಗ,ಹಳದಿ ರೋಗ ಮುಂತಾದ ರೋಗದಿಂದ ಮಲೆನಾಡಿನ ಹೆಗ್ಗುರುತಾಗಿದ್ದ ಅಡಿಕೆ ತೋಟಗಳು ಬರಿದಾಗುತ್ತಿದೆ.ಒಮ್ಮೆ 1 ಮರ ಹೋದರೂ ಅದು ಬೆಳೆಗಾರರ ಪಾಲಿಗೆ ಅದು ಸಾವಿರಾರು ರೂಗಳಿಗೆ ಸಮಾನ.ಏಕೆಂದರೆ ಅಡಿಕೆ ಬೆಳೆ 1 ವರ್ಷಕ್ಕೆ ಬೆಳೆ ಸಿಗುವಂಥದಲ್ಲ.ಅದರ ಪಸಲು ಕೈಗೆ ಸಿಗಲು 10-15 ವರ್ಷವಾದರೂ ಬೇಕು.ದೀರ್ಘಾವಧಿ ಬೆಳೆಯಾದ್ದರಿಂದ ಅದನ್ನು ರಕ್ಷಿಸಿಕೊಳ್ಳುವುದು ಬೆಳೆಗಾರರಿಗೆ ಅವಶ್ಯವಾಗಿದೆ.ಸರಕಾರ ರೋಗದ ಬಗ್ಗೆ ಸಂಶೋಧನೆಗೆ ಹೆಚ್ಚಿನ ಒತ್ತನ್ನು ನೀಡಬೇಕಾಗಿದೆ.ಶ್ರೀಮಂತ ಬೆಳೆ ಎಂದು ಯಾಮದೇ ಪರಿಹಾರ ಅಡಿಕೆ ಬೆಳೆಗಾರರಿಗೆ ಸಿಗುತ್ತಿಲ್ಲ.ನೈಜ ಸ್ಥಿತಿ ಹಾಗೆ ಇಲ್ಲದೇ ಇರುವುದರಿಂದ ಇದನ್ನು ಪ್ಲಾಂಟೇಶನ್‌ ಬೆಳೆಗೆ ಸೇರಿಸಬೇಕು ಮತ್ತು ಅದಕ್ಕೆ ಸಿಗುವ ಸೌಲ್ಯ ನೀಡಬೇಕು ಎಂಬುದು ಅಡಿಕೆ ಬೆಳೆಗಾರರ ಕನಸು.ಅಡಿಕೆಗೆ ಈಗಾಗಲೇ ಹೋಗಿರುವ ಮಾನ ಯಾವುದರಿಂದಲಾದರೂ ಬರುತ್ತದೆಯೇ?ಕಾದು ನೋಡಬೇಕಷ್ಟೆ.

ನಿತಿನ್‌ ಮುತ್ತಿಗೆ nitinmuttige@gmail.com

1 comment:

ಮನಸ್ವಿ said...

ಅಡಿಕೆ ಬೆಳೆಗಾರರ ಸಂಕಷ್ಟವನ್ನು ಮನ ಮುಟ್ಟುವಂತೆ ವಿವರಿಸಿದ್ದೀರಿ... ಸಾಗರದಂತ ಪಟ್ಟಣ ಮಾರುಕಟ್ಟೆ ಸಂಪೂರ್ಣವಾಗಿ ಅಡಿಕೆ ಬೆಳೆಗಾರರ ಮೇಲೆ ಅವಲಂಬಿತವಾಗಿದೆ, ಅಡಿಕೆಗೆ ಬೆಲೆ ಬಂದರೆ ಮಾರುಕಟ್ಟೆಯಲ್ಲಿ ವ್ಯವಹಾರಗಳು ನೆಡೆಯುತ್ತವೆ ಇಲ್ಲದಿದ್ದಲ್ಲಿ ಅಂಗಡಿ ಮುಂಗಟ್ಟೆಗಳು ತಣ್ಣಗಿರುತ್ತವೆ...

ಕೆಂಪಡಿಕೆ ತನ್ನ ಬೆಲೆ ಕಳೆದುಕೊಳ್ಳಲು ಕಾರಣ ವರ್ತಕರು ಅಡಿಕೆಗೆ ಕಾವಿ ಬಣ್ಣ ಬೆರೆಸಿ ಮಾರಾಟಮಾಡುವುದರಿಂದ ಕೆಂಪಡಿಕೆ ತನ್ನ ಗುಣಮಟ್ಟ ಕಾಯ್ದುಕೊಳ್ಳಲಾಗದೆ ಬೆಲೆ ಕಳೆದುಕೊಳ್ಳುತ್ತಿದೆ.. ಸುಗ್ಗಿಯ ಕಾಲ ಬಂತೆಂದರೆ ಬಣ್ಣದ ಅಂಗಡಿಗಳಲ್ಲಿ ಕಾವಿ ಬಣ್ಣ ಒಯ್ಯಲು ಹಮಾಲಿಗಳು ಬರುತ್ತಾರೆ ಅದು ಅಡಿಕೆಗೆ ಮಿಶ್ರಣ ಮಾಡಲು ಒಯ್ಯುತ್ತಿದ್ದಾರೆ ಎಂಬುದು ಅಂಗಡಿಯಾತನಿಗೆ ಗೊತ್ತಿದ್ದರೂ ತನಗೆ ವ್ಯಾಪಾರವಾಗುತ್ತದೆ ಎನ್ನುವ ಕಾರಣ ಏನು ಪ್ರಶ್ನಿಸದೆ ಮಾರಾಟ ಮಾಡುತ್ತಿದ್ದಾರೆ.. ನಾವು ಎಲ್ಲಾ ಗೊತ್ತಿದ್ದರೂ ಏನೂ ಮಾಡಲಾಗುತ್ತಿಲ್ಲ.. ನಾನು ಒಬ್ಬ ವರ್ತಕರ ತೋಟದ ಮನೆಯಲ್ಲಿ ಸಿಮೆಂಟ್ ಕಲೆಸುವ ಮಿಕ್ಸರ್ ಮತ್ತು ಕಾವಿ ಬಣ್ಣದ ಡಬ್ಬಗಳನ್ನು ನೋಡಿ ದಂಗು ಬಡಿದುಹೋಗಿದ್ದೇನೆ.. ಇದಕ್ಕೆಲ್ಲಾ ಕಡಿವಾಣ ಸಾಧ್ಯವಾ??