

ಒಂದೂವರೆ ಎಕರೆ ಜಾಗ. ಬೆಳೆಯುವ ಬೆಳೆ ಭತ್ತ. ಒಂದಲ್ಲ, ಎರಡಲ್ಲ ಬರೋಬ್ಬರಿ 70 ದೇಶೀ ತಳಿಗಳು! ಸಣ್ಣ ಕಾಳು, ದೊಡ್ಡ ಕಾಳು, ಕಪ್ಪು ಕಾಳು, ಬಂಗಾರದಂತಹ ಭತ್ತದ ಕಾಳು ನಳನಳಿಸುವ ತಾಕುಗಳು. ಯಾವ ಕೃಷಿ ವಿಶ್ವವಿದ್ಯಾಲಯಗಳಲ್ಲೂ ಕಾಣ ಸಿಗದಿರುವಂತಹ ಜೀವಂತ ದೃಶ್ಯ ಕಣ್ಣಿಗೆ ಹಿತ ನೀಡುತ್ತದೆ. ಇದು ಮಂಡ್ಯ ಹತ್ತಿರದ ಶಿವಳ್ಳಿಯ ರೈತ ಬೋರೇಗೌಡರ ಹೊಲ.
ಹೈಬ್ರೀಡ್ ಭತ್ತ, ಗೊಬ್ಬರದ ಭರಾಟೆಯಲ್ಲಿ ನಮ್ಮ ನೆಲ ಮೂಲದ ದೇಶೀ ಭತ್ತದ ತಳಿಗಳು ಕಣ್ಮರೆಯಾಗುತ್ತವೆ. 'ದೇಶೀ ಭತ್ತ ಉಳಿಸಿ' ಆಂದೋಲನಕ್ಕೆ ಮೂರ್ತ ರೂಪದಲ್ಲಿ ಹೋರಾಟ ಮಾಡುತ್ತಿರುವ ರೈತ ಇವರು. ಎಲ್ಲರಂತೆ ಇವರೂ ರಾಸಾಯನಿಕ ಗೊಬ್ಬರ ಬಳಸಿ ಬೇಸಾಯ ಮಾಡುತ್ತಿದ್ದರು. ಇದರಿಂದ ಬೆಳೆಯ ಇಳುವರಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಬಂತು. ಉತ್ಪಾದನೆಯ ವೆಚ್ಚಕ್ಕೂ ಹುಟ್ಟುವಳಿಗೂ ಸಮನಾಗ ತೊಡಗಿತು.
ಇಂತಹ ಸಮಯದಲ್ಲಿ ಇವರನ್ನು ಪಾಳೇಕರ್ ಕೃಷಿ ಪದ್ಧತಿ ಸೆಳೆಯಿತು. ಇದರೊಂದಿಗೆ ಸಾವಯವ ಕೃಷಿಯ ಕುರಿತು ಪತ್ರಿಕೆಗಳಲ್ಲಿ ಬರುವ ಲೇಖನಗಳು ಇವರನ್ನು ಆಕಷರ್ಿಸಿತು.
ಸಾವಯವ ಕೃಷಿ ಮಾಡಲು ಪ್ರಾರಂಭಿಸಿದರು. ಹೈಬ್ರೀಡ್ ಭತ್ತದ ಬೆಳೆಗೆ ಸಾವಯವ ಕೃಷಿ ಅಳವಡಿಸಿಕೊಳ್ಳಲು ಯತ್ನಿಸಿದರು. ಆದರೆ ಪ್ರಯೋಜನ ಶೂನ್ಯ. ಸಾವಯವ ಕೃಷಿ ಯಶ ಕಾಣಬೇಕಿದ್ದರೆ ನಮ್ಮ ನೆಲದ ಭತ್ತದ ತಳಿಗಳಿಗೆ ಸೂಕ್ತ ಎಂದು ಮನಗಂಡರು. ದೇಶೀ ಭತ್ತದ ತಳಿಗಳ ಹುಟುಕಾಟಕ್ಕೆ ಪ್ರಾರಂಭಿಸಿದರು. ಆಗ ಪರಿಚವಾದವರು ಬೆಳ್ತಂಗಡಿ ಹತ್ತಿರದ ಕಿಲ್ಲೂರು ದೇವರಾಯರು. ಇವರು ಕೂಡಾ ಅಪರೂಪದ ಭತ್ತದ ಸಂರಕ್ಷಕರು. ಇವರಲ್ಲಿಗೆ ಹೋಗಿ ನಾಲ್ಕೈದು ತಳಿಯ ಭತ್ತವನ್ನು ತಲಾ 200 ಗ್ರಾಂ ಭತ್ತದ ಬೀಜಗಳನ್ನು ತಂದು ನಾಟಿ ಮಾಡಿದರು. 2003ನೇ ಸಾಲಿನಲ್ಲಿ 30 ಗುಂಟೆ ಜಮೀನಿನಲ್ಲಿ 26 ತಳಿಗಳನ್ನು ಬೆಳೆದರು. ಇದರ ಪರಿಣಾಮ ಇಂದು 70 ಭತ್ತದ ತಳಿಗಳನ್ನು ಬೆಳೆಯಲಿಕ್ಕೆ ಪ್ರೇರಕವಾಯಿತು.
ಇವರಲ್ಲಿರುವ ಭತ್ತದ ತಳಿಗಳು: ಸಿಪ್ಪಾಗಂಗ್, ಗಿಡ್ಡ ಬಾಸ್ಮತಿ, ಕಲನಮಕ್, ಅಂಬೆಮೋರ್, ಹೊಳೆಸಾಲು ಚಿಪ್ಪಿಗ, ಪರಿಮಳಸಣ್ಣ, ಮುಕ್ಕಣ್ಣುಸಣ್ಣ, ಕೃಷ್ಣಲೀಲಾ, ಬಾಸ್ಮತಿ ಸುಗಂಧ, ಗಂಧಸಾಲೆ, ಎಚ್ಎಂಟಿ, ಜೀರಿಗೆ ಸಾಂಬಾ, ರತ್ನಚೂಡಿ, ನಾಗಾಭತ್ತ, ಗೌರಿಸಣ್ಣ, ಬಂಗಾರಸಣ್ಣ, ನವರ, ಬಾದ್ಷಾ ಬೋಗ್, ಬೋರೇಗೌಡ 1, 2, 3, 4, 5, 6, 7, ಮಾಲ್ಗುಡಿಸಣ್ಣ, ರಾಜ್ ಬೋಗ್, ಕಪ್ಪು ಬಾಸ್ಮತಿ, ಕುರಿಗೆ ನೆಲ್ಲು, ದೆಹಲಿ ಬಾಸ್ಮತಿ, ಮೆಹಾಡಿ, ಚೋಮಲ್, ಎಂಎನ್ನೆಸ್-2, ಜಿರಿಗೆ ಸಣ್ಣ, ಸೇಲಂಸಣ್ಣ, ಮಲ್ಲಾನ್ಛೆನ್ನಾ, ತೊಂಡಿ, ತೊನ್ನುರು ರಾಮಾತೊಂಡಿ, ಜಿರಿಗೆ ಸಾಲಾ, ಅಚ್ಯುತನ್, ಮುಲ್ಲಾಪುಂಡಿ, ಕಲಾದ್ಯಾನ್, ರಾಯಚೂರು ಸಣ್ಣ, ಆನಂದನೂರ್ಸಣ್ಣ, ಬಿಳಿನೆಲ್ಲು, ಆಂದಾನೂರ ಸಣ್ಣ, ಚಿನ್ನಾಪೊನ್ನಿ ಕರಿಗಿಜಿಬಿಲಿ, ಕಾಲಾಜಿರಾ, ಬಮರ್ಾಬ್ಲಾಕ್, ರಸದ್ಕಂ ಮುಂತಾದ ತಳಿಗಳನ್ನು ಬೋರೇಗೌಡರು ಬೆಳೆಸುತ್ತಿದ್ದಾರೆ. ಇವುಗಳಲ್ಲಿ ಔಷಧಿಯ ಗುಣ ಮತ್ತು ಸುಗಂಧ ಭರಿತ ಭತ್ತದ ತಳಿಗಳು ಇವೆ.
ಹಸಿರು ಗೊಬ್ಬರ, ಜೀವಾಮೃತ ಕೃಷಿ: ಈ ಎಲ್ಲ ಭತ್ತದ ತಳಿಗಳು ಸರಿಯಾಗಿ ಬೆಳೆಯಲು ರಾಸಾಯನಿಕ ಗೊಬ್ಬರ ಖರೀದಿ ಮಾಡುವುದನ್ನು ನಿಲ್ಲಿಸಿದ ಬೋರೇಗೌಡರು. ಮಳೆಗಾಲ ಪ್ರಾರಂಭಕ್ಕೂ ಮುನ್ನ ಹುರುಳಿ, ಅಲಸಂಡೆ, ಡಾಯಂಚಾ, ಸೆಣಬು, ಎಳ್ಳು ಇವುಗಳನ್ನು ಹಸಿರೆಲೆ ಗೊಬ್ಬರವಾಗಿ ಬೆಳೆಸಿದರು. ಹೊಲ ಹದ ಮಾಡುವ ಸಮಯದಲ್ಲಿ ಇವುಗಳನ್ನು ಸೇರಿಸಿ ಉಳುಮೆ ಮಾಡಿದರು. ನಂತರ ಭೂಮಿ ಮತ್ತಷ್ಟು ಫಲವತ್ತಾಗಲು ಜೀವಾಮೃತ ಬಳಸಲು ಪ್ರಾರಂಭಿಸಿದರು. ಇದರಿಂದ ಭೂಮಿಯ ಫಲವತ್ತತೆ ದ್ವಿಗುಣವಾಗಿ, ಇಳುವರಿಯು ಹೆಚ್ಚಾಯಿತು.
ಸುಗಂಧ ಭತ್ತದ ಬಳಕೆ
ಸುಗಂಧ ಭತ್ತಗಳ ಅಕ್ಕಿಯನ್ನು ಮಾತ್ರ ಅಡುಗೆಗೆ ಬಳಸಬಾರದು. ಒನ್ನೊಮ್ಮೆ ಕೇವಲ ಸುಗಂಧ ಭತ್ತಗಳನ್ನು ಬಳಸಿದರೆ ಸೆಂಟಿನ ಬಾಟಲಿ ಪೂರ್ಣ ಮೈಮೇಲೆ ಸುರಿದುಕೊಂಡ ಹಾಗಾಗುತ್ತದೆ. ಅದನ್ನೇ ಹಿತಮಿತವಾಗಿ ಬಳಸಿದರೆ ಎಲ್ಲರಿಗೂ ಹಿತ. ಹಾಗೆಯೇ ಸುಗಂಧ ಅಕ್ಕಿ ಬಳಸುವ ವೇಳೆ ಸಾದಾ ಅಕ್ಕಿಯ ಜೊತೆ ಒಂದು ಮುಷ್ಠಿ ಸುಗಂಧ ಅಕ್ಕಿಯನ್ನು ಬಳಸಿರೆ ಬಹಳ ಚೆನ್ನಾಗಿರುತ್ತದೆ ಎನ್ನುವ ಮಾಹಿತಿಯನ್ನು ಬೋರೇಗೌಡರು ನೀಡುತ್ತಾರೆ.
ರಾಸಾಯನಿಕ ಕೃಷಿ, ಹೈಬ್ರೀಡ್ ಭತ್ತದಲ್ಲಿ ಬರುವ ಲಾಭಕ್ಕಿಂತ ಹೆಚ್ಚಿನ ಲಾಭ ಸಾವಯವ ಕೃಷಿ ಮತ್ತು ದೇಶೀ ಭತ್ತದ ಬೆಳೆಯಿಂದ ಬರುತ್ತದೆ ಎನ್ನುವುದು ಬೋರೇಗೌಡರ ಅಭಿಮತ. ಇವರು ನಾಲ್ಕು ವರ್ಷಗಳಿಂದ ಸುಮಾರು 150 ಕ್ವಿಂಟಾಲ್ ಭತ್ತದ ಬೀಜ ಮಾರಾಟ ಮಾಡಿದ್ದಾರೆ. ಈ ರೀತಿಯಲ್ಲಿ ದೇಶೀ ಭತ್ತದ ತಳಿಗಳನ್ನು ರಕ್ಷಿಸುತ್ತಿರುವ ಬೋರೇಗೌಡರು ಕಾರ್ಯ ಶ್ಲಾಘನೀಯ.
ಭತ್ತದ ತಳಿಗಳ ಬಗ್ಗೆ ಮಾಹಿತಿಗಾಗಿ ಬೋರೇಗೌಡ-9986381167, ಎಸ್. ಶಂಕರ್- 9886853858
-ನಾಗರಾಜ ಮತ್ತಿಗಾರ
`ಪ್ರತಿ ವರ್ಷ ಬರದಿಂದ ದೀಪಾವಳಿ ಹಬ್ಬ ಮಾಡಾಕ ಆಗೂದಿಲ್ರಿ. ಈ ವರ್ಷ ನಾವು ಬೆಳಿ ಚೆನ್ನಾಗಿ ಬಂದಿತ್ರಿ. ಆದ್ರ ನೆರಿ ಬಂದು ಎಲ್ಲಾ ಹಾಳಗಿ ಹೋತ್ರಿ. ದೊಡ್ಡಹಬ್ಬಕ್ಕ ದೀಪ ಹಚ್ಚಾಕ ಮನಿನೇ ಕೊಚ್ಚಿ ಹೋಗ್ಯಾವ್ರಿ' ಎನ್ನುವಾಗ ನೆರೆ ಪೀಡಿತ ಪ್ರದೇಶದ ರೈತನ ಕಣ್ಣಂಚಿನಿಂದ ನೀರು...
ನಿಜ, ಏನು ಆಗಬಾರದಿತ್ತೋ ಅದು ಆಗಬಾರದ ಸಮಯದಲ್ಲಿ ಆದರೆ ಕಷ್ಟ ಖಂಡಿತ. ಹಾಗೆಯೇ ಬರಬಾರದ ಸಮಯದಲ್ಲಿ ಬಂದ ಮಳೆಯ ಆರ್ಭಟಕ್ಕೆ ಸಹಸ್ರಾರು ರೈತರು ಬೆಳೆಯ ಜೊತೆಗೆ ನೆಲೆಯನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ನಾಲ್ಕು ದಿನದ ಮಳೆಯಲ್ಲಿ ಕೊಚ್ಚಿ ಹೋದ ಸಂಪತ್ತನ್ನು ಪುನಃ ಸಂಗ್ರಹಿಸಲು ನಲವತ್ತು ವರ್ಷ ಬೇಕಾಗಬಹುದು ಎಂದರೆ ಅತಿಶಯೋಕ್ತಿಯಲ್ಲ.
ಕೊಯ್ಲಿಗೆ ಬಂದ ಜೋಳ, ರಾಗಿ, ಭತ್ತದ ಗದ್ದೆಗಳು ಸಂಪೂರ್ಣ ನಾಶವಾಗಿದೆ. ಸಹಸ್ರಾರು ಕೋಟಿ ರೂಪಾಯಿ ನಷ್ಟವಾಗಿದೆ. ರಾಜ್ಯದ ಜನತೆಗೆ ಅನ್ನ ನೀಡುವ ಕೈಗಳು ತುತ್ತು ಅನ್ನಕ್ಕಾಗಿ ಕೈಚಾಚುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸದ ಸಂಗತಿ.
ನೆರೆಯಿಂದ ಬೆಳೆ ಹಾನಿ: ನೆರೆ ಇಳಿಯುತ್ತಿದ್ದಂತೆ ಉಂಟಾದ ಹಾನಿಯ ಪ್ರಮಾಣ ಗೊತ್ತಾಗುತ್ತಿದೆ. ಆದರೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. ಒಂದು ಅಂದಾಜಿನ ಪ್ರಕಾರ ಬೆಳಗಾವಿಯಲ್ಲಿ ಹತ್ತಿರ ಹತ್ತಿರ ಎರಡು ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಹಾವೇರಿಯಲ್ಲಿ ಒಂದು ಲಕ್ಷ, ಧಾರವಾಡದಲ್ಲಿ ಒಂದು ಲಕ್ಷ, ಗದಗದಲ್ಲಿ ತೊಂಬತ್ತೊಂಬತ್ತು ಸಾವಿರ, ಕಲಬುರ್ಗಿಯಲ್ಲಿ ಎರಡು ಲಕ್ಷ ಹೆಕ್ಟೇರ್ ಬಾಗಲಕೋಟೆಯಲ್ಲಿ ನಲವತ್ತು ಸಾವಿರ, ವಿಜಾಪುರದಲ್ಲಿ ಮೂವತ್ತೆರಡು ಸಾವಿರ ಹೆಕ್ಟೇರ್ ಭೂಮಿಯಲ್ಲಿನ ಬೆಳೆಗಳು ನಾಶವಾಗಿದೆ. ಬಳ್ಳಾರಿ, ಶಿರಗುಪ್ಪ, ಹೊಸಪೇಟೆ, ಕೊಯ್ಲಿಗೆ ಬಂದು ನಿಂತಿದ್ದ ಮೆಣಸು, ಭತ್ತ, ಮೆಕ್ಕೆ ಜೋಳ ನಾಶವಾಗಿದೆ.
ರೈತರ ಅಳಲು: `ನಾವು ಭತ್ತ, ಮೆಣಸಿನಕಾಯಿ, ಮೆಕ್ಕೆ ಜೋಳವನ್ನು ಬೆಳೆಯುತ್ತೆವೆ. ನಮಗೆ ಭತ್ತದ ಬೆಳೆಯಲ್ಲಿ ಒಂದು ಎಕರೆಗೆ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚಿಗೆ ನಷ್ಟವಾಗಿದೆ. ಮೆಕ್ಕೆ ಜೋಳ ಒಂದು ಎಕರೆಗೆ 30 ಚೀಲ ಬರುತ್ತಿತ್ತು. ಈಗ 10 ಚೀಲ ಬಂದರೆ ಹೆಚ್ಚಿಗೆ. ಕೆಂಪು ಮೆಣಸಿನ ಬೆಳೆ ಸಂಪೂರ್ಣ ನಾಶವಾಗಿದೆ. ಇದನ್ನು ಕಿತ್ತು ಹಾಕಬೇಕು. ನಮ್ಮೂರಿನ ಕೆರೆ ಒಡೆದು ನೂರಾರು ಪಂಪ್ ಸೆಟ್ಗಳು ಕೊಚ್ಚಿಹೋಗಿದೆ. ಈಗ ನಮ್ಮ ಜಮೀನನನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಾಲ್ಕು ತಿಂಗಳಿಂದ ಉತ್ತಮ ಬೆಳೆ ಬಂದು ಒಳ್ಳೆಯ ಆದಾಯವನ್ನು ಪಡೆಯುತ್ತೇವೆ ಎನ್ನುವ ಆಸೆಯಲ್ಲಿದ್ದೇವು. ನಮ್ಮ ಆಸೆ, ಕನಸು ನಮ್ಮ ಬೆಳೆಯೊಂದಿಗೆ ನೆರೆಯಲ್ಲಿಯೇ ಕೊಚ್ಚಿ ಹೋಯಿತು' ಎಂದು ಸಂಕಟ ಪಡುತ್ತಾರೆ ಬಳ್ಳಾರಿಯ ಬಾಗನಹಟ್ಟಿಯ ರೈತ ಶಿವಶಂಕರ್.
ಗಂಗಾವತಿಯ ರೈತರ ಗೋಳು ಮತ್ತೊಂದು ರೀತಿಯದ್ದು. ಒಂದು ಕಡೆ ನೆರೆಯಿಂದ ಭತ್ತದ ಬೆಳೆ ನಾಶವಾದರೆ, ಮತ್ತೊಂದು ಕಡೆಯಲ್ಲಿ ತುಂಗಭದ್ರಾ ನಾಲೆ ಒಡೆದು ಬೆಳೆ ನಾಶವಾಗಿದೆ. ಇಲ್ಲಿನ ರೈತ ವೇಣುಗೋಪಾಲ್ ಅವರ ಪ್ರಕಾರ `ಸಾವಿರಾರು ಎಕರೆ ಭತ್ತದ ಹೊಲಗಳಲ್ಲಿ ಎಕರೆಗೆ ಹತ್ತು ಚೀಲ ಬೆಳೆಯು ಸಿಗುವುದಿಲ್ಲ. ನೆರೆಯಿಂದ ಆದಷ್ಟೇ ಹಾನಿ. ನಾಲೆ ಒಡೆದು ಆಗಿದೆ. ನಾಲೆಯ ನೀರನ್ನೇ ಆಶ್ರಯಿಸಿ ಸಿಂದನೂರು, ಗಂಗಾವತಿ, ಮಸ್ಕಿ, ಮಾನ್ವಿ ಯ ಸಾವಿರಾರು ರೈತರು ಭತ್ತ, ಕೆಂಪು ಮೆಣಸಿನಕಾಯಿ, ಹತ್ತಿ ಬೆಳೆಯುತ್ತಾರೆ. ಈ ಬಾರಿ ನಾಲೆ ಒಡೆದು ಬೇಕಾದ ಸಮಯಕ್ಕೆ ನೀರನ್ನು ಬಿಡಲಾಗದೆ ಬೆಳೆಗಳು ಒಣಗಿ ಹೋಗಿದೆ. ನಾವು ಒಂದು ಕಡೆ ನೀರು ಹೆಚ್ಚಾಗಿ ಬೆಳೆ ಹಾನಿಯಾದರೆ, ಮತ್ತೊಂದು ಕಡೆ ನೀರಿಲ್ಲದೆ ಸಂತ್ರಸ್ತರಾಗಿದ್ದೇವೆ' ಎನ್ನುತ್ತಾರೆ.
ಗದಗದ ರೈತರ ಸಂಕಷ್ಟ ಮತ್ತೊಂದು ರೀತಿಯದ್ದು. ಇಲ್ಲಿನ ರೈತ ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ ಇವರನ್ನು ಮಾತನಾಡಿಸಿದಾಗ ನೆರೆಗೆ ಒಳಗಾದ ರೈತರ ಕಷ್ಟವನ್ನು ಎಳೆಎಳೆಯಾಗಿ ಬಿಡಿಸಿಡುತ್ತಾರೆ. `ಗದಗದ ಹುಲಗನಗೇರಿ, ಮೆಣಸಿ, ಕಾಡಗೂಳಿ, ಕುರವಿನಕೊಪ್ಪದಲ್ಲಿ ರೈತರು ಅಕ್ಷರಶಃ ನಿರ್ಗತಿಕರಾಗಿದ್ದಾರೆ. ಈ ಭಾಗದಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಬಾರಿ ರೈತರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆಗಿದ್ದೆ ಬೇರೆ. ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು ಎನ್ನುವ ಹಾಗೆ. ನಮ್ಮ ಅನ್ನವಾದ ಜೋಳ, ರಾಗಿ ಎಲ್ಲ ನೀರು ಪಾಲಾಗಿದೆ. ಈರುಳ್ಳಿ ಬೆಳೆ ಸಂಪೂರ್ಣ ಕೊಳೆತು ಹೋಗಿದೆ. ಈಗ ನಮ್ಮ ರೈತರ ಹೊಲಕ್ಕೆ ಹೋಗಿ ನೋಡಿದರೆ ಹೂಳು ಮಾತ್ರ ಇದೆ. ನೆರೆ ಬೆಳೆಯನ್ನು ಮಾಯ ಮಾಡಿಕೊಂಡು ಹೋಗಿದೆ. ನೇಗಿಲು, ನೊಗ ನೀರು ಪಾಲಾಗಿದೆ. ರೈತರು ಶಾಲೆ, ರೈಲು ನಿಲ್ದಾಣದಲ್ಲಿ ವಾಸಿಸುತ್ತಿದ್ದಾರೆ.
ರೋಣ ತಾಲೂಕಿನಲ್ಲಿ ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿ ಸೇರುವ ಜಾಗದಲ್ಲಿ ಯಾವಾಗಲೂ ನೆರೆ ಆಗುತ್ತಿತ್ತು. ಆದರೆ ಈ ಬಾರಿ ನಿರೀಕ್ಷೆಗೂ ಮೀರಿ ನೆರೆ ಬಂದು ಬಿಟ್ಟಿತು. ಬೆಣ್ಣೆಹಳ್ಳದ ಬಗ್ಗೆ ಬಹಳಷ್ಟು ವರ್ಷದಿಂದ ಗೊತ್ತಿರುವ ಜನಪ್ರತಿನಿಧಿಗಳು ಮೌನ ವಹಿಸಿರುವುದು ನೋವಿನ ಸಂಗತಿ. ಇದು ಒಂದೆಡೆಗೆ ಆದರೆ ಬಡ ರೈತರು ಮನೆಯಲ್ಲಿ ಕಣಜ ಮಾಡಿಕೊಂಡು ದಾಸ್ತಾನು ಮಾಡಿಟ್ಟುಕೊಂಡ ಬೆಳೆಯೆಲ್ಲ ಕೊಚ್ಚಿ ಹೋಗಿದೆ' ಎನ್ನುತ್ತಾರೆ.
ಸೋಯಾ ಬೀನ್, ಭತ್ತ, ರಾಗಿ, ಜೋಳ, ಸೂರ್ಯಕಾಂತಿ, ತೊಗರಿ, ಮೆಣಸು, ದ್ರಾಕ್ಷಿ, ದಾಳಿಂಬೆ, ತರಕಾರಿ, ಕಬ್ಬು, ಶೇಂಗಾ, ಮುಂತಾದ ಬೆಳೆಗಳು ನಾಶವಾಗಿದೆ. ಸದಾ ಕಷ್ಟದಲ್ಲಿಯೇ ಜೀವನ ಸಾಗಿಸುವ ರೈತನಿಗೆ ನೆರೆ ಎನ್ನುವುದು ಗಾಯದ ಮೇಲೆ ಬರೆ ಹಾಕಿದಂತೆ ಆಗಿದೆ. ಬೆಳೆ ಬೆಳೆಯಲು ಹಾಕಿದ ಬಂಡವಾಳ ಸಮೇತ ಬೆಳೆಯು ಇಲ್ಲದಂತಾಗಿದೆ. ಜೊತೆಯಲ್ಲಿ ಖಾಸಗಿ ಸಾಲ, ಬ್ಯಾಂಕ್ ಸಾಲ ತೀರಿಸುವ ಹೊಣೆಯು ರೈತನಿಗಿದೆ.
ಇಂತಹ ರೈತರಿಗೆ ಪರಿಹಾರದ ಜೊತೆ ಆತ್ಮ ಸ್ಥೈರ್ಯ ಮುಖ್ಯ. ನೆರೆ ಸಂತ್ರಸ್ತ ರೈತರು ಬದುಕುವ ಉತ್ಸಾವನ್ನೇ ಕಳೆದು ಕೊಂಡಿದ್ದಾರೆ. ಇವರಿಗೆ ಪರಿಹಾರ ನೀಡಿದರೆ ಸಾಲದು ಬದುಕುವ ಉತ್ಸಾಹವನ್ನು ಮೂಡಿಸುವ ಅಗತ್ಯವಿದೆ.
ಮುಗಿಸುವ ಮುನ್ನ: ಬದುಕಲು ಅವಶ್ಯಕವಾದ ಆಹಾರ ಬೆಳೆಗಳು ನಾಶವಾಗಿರುವುದು ಕೇವಲ ಬೆಳೆ ಬೆಳೆಯುವ ರೈತನಿಗೆ ಮಾತ್ರವಲ್ಲ ಅದನ್ನು ಉಣ್ಣುವ ರಾಜ್ಯದ ಇತರ ಭಾಗದ ಜನತೆಯ ಮೇಲೂ ಪರಿಣಾಮ ಬೀರಲಿದೆ.
ನಾಗರಾಜ ಮತ್ತಿಗಾರ